ಕೆಪಿಎಸ್‌ಸಿ ನೇಮಕಾತಿ : ವಿಧೇಯಕ ಮಂಡಿಸಿದ ಕರ್ನಾಟಕ ಸರ್ಕಾರ

ಬೆಂಗಳೂರು, ಡಿಸೆಂಬರ್ 19 : ಕರ್ನಾಟಕ ಸರ್ಕಾರ ಕರ್ನಾಟಕ ಲೋಕಸೇವಾ ಆಯೋಗದ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಸಂಬಂಧ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿದೆ.

ಸೋಮವಾರ ವಿಧಾನಸಭೆಯಲ್ಲಿ ಕರ್ನಾಟಕ ಸಿವಿಲ್ ಸೇವೆಗಳ ನೇಮಕಾತಿಗಾಗಿ ಅಭ್ಯರ್ಥಿಗಳ ಆಯ್ಕೆ ಕಾರ್ಯವಿಧಾನ ವಿಧೇಯಕವನ್ನು ಮಂಡಿಸಲಾಗಿದೆ. ನೇಮಕಾತಿಯಲ್ಲಿ ಆಗಿರುವ ದೋಷವನ್ನು ಸರಿಪಡಿಸಲು ಇದು ಸಹಕಾರಿಯಾಗಲಿದೆ.

ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ನೇಮಕಾತಿ ಸಂಬಂಧ 1998, 1999 ಹಾಗೂ 2004ರಲ್ಲಿ ಆಗಿರುವ ಲೋಪ ಸರಿಪಡಿಸಲು ಸರ್ಕಾರ ಮುಂದಾಗಿದೆ. ರಾಜ್ಯದ ಸಿವಿಲ್ ಸೇವೆಗಳಲ್ಲಿ ಯಾವುದೇ ಹುದ್ದೆ ನೇಮಕಾತಿಗಾಗಿ ಆಯ್ಕೆಯ ಕಾರ್ಯ ವಿಧಾನ ಅನುಸೂಚಿತ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಪಟ್ಟಿ ಸಿದ್ಧಡಿಸಲು ಸಹಕಾರಿಯಾಗಲಿದೆ.

ವಿಧೇಯಕದ ಅನ್ವಯ ಇನ್ನು ಮುಂದೆ ಆಯ್ಕೆ ಪ್ರಾಧಿಕಾರ. ಮೂರು ಹಂತದಲ್ಲಿ ಅಭ್ಯರ್ಥಿ ಪಟ್ಟಿ ತಯಾರಿಸಲು ತಿದ್ದುಪಡಿ ತರಲಾಗಿದೆ. ಮೊದಲನೆಯದಾಗಿ ಕೇವಲ ಅರ್ಹತೆ ಆಧಾರದ ಮೇಲೆ ಪಟ್ಟಿ ತಯಾರಿಸಬೇಕು.

2ನೇ ಪಟ್ಟಿಯಲ್ಲಿ ಸಾಮಾನ್ಯ ಅರ್ಹತೆ ಮೇರೆಗೆ ಅಂದರೆ ಪ.ಜಾ/ಪ.ಪಂ ಹಾಗೂ ಹಿಂದುಳಿದ ವರ್ಗಗಳಿಗಾಗಿ ಮೀಸಲಿಡುವ ಹುದ್ದೆಗಳನ್ನು ಬಿಟ್ಟು ಇತರ ಹುದ್ದೆಗಳ ಭರ್ತಿಗೆ ಮೊದಲನೇ ಪಟ್ಟಿಯಿಂದ ಹೆಸರು ತೆಗೆದು ಅರ್ಹತೆ ಆಧಾರದ ಮೇಲೆ ಸಿದ್ಧಪಡಿಸಬೇಕು.

ಮೊದಲು ಮತ್ತು 2ನೇ ಪಟ್ಟಿಯ ಭಾಗವನ್ನು ಹೊರತುಪಡಿಸಿ 3ನೇ ಪಟ್ಟಿಯನ್ನು ಅನುಸೂಚಿತ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳ ಹೆಸರು ಒಳಗೊಂಡಂತೆ ಪ್ರತಿಯೊಂದು ವರ್ಗಕ್ಕೆ ಮೀಸಲಿಡುವ ಹುದ್ದೆಗಳಿಗೆ ಸಮಾನವಾಗಿ ಮೊದಲನೇ ಪಟ್ಟಿಯಲ್ಲಿ ನಿಗದಿಪಡಿಸಿದ ಅರ್ಹತೆಗೆ ಅನುಗುಣವಾಗಿ ಅನುಕ್ರಮ ತಯಾರಿಸಬೇಕು.

ಹೀಗೆ ತಯಾರು ಮಾಡಿದ ಮೂರು ಪಟ್ಟಿಗಳ ಅನ್ವಯವೇ ನೇಮಕಾತಿ ಪ್ರಕ್ರಿಯೆ ನಡೆಯಲಿದೆ. ಹೆಚ್ಚುವರಿ ಪಟ್ಟಿ ತಯಾರು ಮಾಡುವ ಸಂದರ್ಭದಲ್ಲಿಯೂ ಇದೇ ಮಾದರಿಯನ್ನು ಅನುಸರಿಸಬೇಕಾಗುತ್ತದೆ.

Please follow and like us:

Related posts

Leave a Comment