ಆಂಧ್ರಪ್ರದೇಶ ಮುಖ್ಯಮಂತ್ರಿ ನರಾ ಚಂದ್ರಬಾಬು
ನಾಯ್ಡು ಅವರು ಪುತ್ರ ನರಾ ಲೋಕೇಶ್ರ ರಾಜಕೀಯ ಭವಿಷ್ಯ ವೃದ್ಧಿಗೊಳಿಸುವುದರತ್ತ ಮಾತ್ರ
ಆಸಕ್ತಿ ವಹಿಸಿದ್ದಾರೆ. ಇದರಿಂದಾಗಿ ರಾಜ್ಯ ಮುಳುಗಿ ಹೋಗಲಿದೆ ಎಂದು ಪ್ರಧಾನಿ ನರೇಂದ್ರ
ಮೋದಿ ಆರೋಪಿಸಿದ್ದಾರೆ.
ಆಂಧ್ರಪ್ರದೇಶದಲ್ಲಿ ಬೂತ್ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ರವಿವಾರ ವಿಡಿಯೋ ಸಂವಾದ ನಡೆಸಿದ ಸಂದರ್ಭದಲ್ಲಿ ಈ ಆರೋಪ ಮಾಡಿದ್ದಾರೆ.
ಆಂಧ್ರಪ್ರದೇಶದ ಗೌರವಕ್ಕಾಗಿ ಮತ್ತು ಕಾಂಗ್ರೆಸ್ ವಿರುದ್ಧದ ಹೋರಾಟಕ್ಕಾಗಿ
ಎನ್.ಟಿ.ರಾಮ ರಾವ್ ತೆಲುಗು ದೇಶಂ ಸ್ಥಾಪಿಸಿದರು. ಆದರೆ ನಾಯ್ಡು ಈಗ ಅದೇ
ಕಾಂಗ್ರೆಸ್ ಜತೆಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಪಕ್ಷದ ಸ್ಥಾಪಕನಿಗೇ ಅವಮಾನ
ಮಾಡಿದ್ದಾರೆ. ಜತೆಗೆ ಮೋಸವನ್ನೂ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಜತೆಗೆ
ಎನ್ಟಿಆರ್ ತೆಲುಗು ಭಾಷಿಕರ ಅಭಿಮಾನದ ಪ್ರತೀಕವಾಗಿದ್ದರು ಎಂದು ಪ್ರಧಾನಿ ಮೋದಿ
ಕೊಂಡಾಡಿದ್ದಾರೆ.
ಚಂದ್ರಬಾಬು ನಾಯ್ಡು ಆಡಳಿತದ ವಿರುದ್ಧ ಕಟುವಾಗಿ ಟೀಕಿಸಿದ ಪ್ರಧಾನಿ ಮೋದಿ, ಅಧಿಕಾರಕ್ಕಾಗಿ ತೆಲುಗು ಭಾಷಿಕರ ಅಭಿಮಾನವನ್ನೇ ಪಣಕ್ಕೆ ಇಡಲಾಗಿದೆ ಎಂದೂ ಆರೋಪಿಸಿದ್ದಾರೆ.