ಗೋಕಾಕ್: ಒಂದೇ ಕುಟುಂಬದ ನಾಲ್ವರು ಕಂದಮ್ಮಗಳು ಕೃಷಿ ಹೊಂಡದಲ್ಲಿ ಬಿದ್ದು ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಅಜ್ಜನಕಟ್ಟಿ ಗ್ರಾಮದಲ್ಲಿ ನಡೆದಿದೆ.
ಅಜ್ಜನಕಟ್ಟಿ ಗ್ರಾಮದ ಕರೆಪ್ಪ ಜಕ್ಕನ್ನವರ ಹಾಗೂ ಮಹಾದೇವಿ ದಂಪತಿಯ ಮಕ್ಕಳಾದ ಭಾಗವ್ವ ಜಕ್ಕನ್ನವರ(೬),ತಾಯಮ್ಮ ಜಕ್ಕನ್ನವರ (೫),ಮಾಳಪ್ಪ ಜಕ್ಕನ್ನವರ(೪)ಹಾಗೂ ರಾಜಶ್ರೀ ಜಕ್ಕನ್ನವರ(೨)ಮೃತಪಟ್ಟರಾಗಿದ್ದಾರೆ.
ಇನ್ನು ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಗ್ರಾಮದಲ್ಲಿನ ಮನೆ ತೊರೆದು ಜಕ್ಕನ್ನವರ ಕುಟುಂಬ ತೋಟದ ಮನೆಗೆ ಶಿಫ್ಟ್ ಆಗಿತ್ತು. ಕೃಷಿಗಾಗಿ ಕರೆಪ್ಪ ಜಕ್ಕನ್ನವರ ತೋಟದಲ್ಲಿ ಕೃಷಿ ಹೊಂಡ ನಿರ್ಮಿಸಿದ್ದರು. ಮೊಬೈಲ್ನಲ್ಲಿ ಆಟ ಆಡುತ್ತ ಕಂದಮ್ಮಗಳು ಕೃಷಿ ಹೊಂಡದ ಕಡೆ ಹೋಗಿದ್ದಾರೆ.
ಈ ವೇಳೆ ಮೊಬೈಲ್ ಕೈಯಿಂದ ಜಾರಿ ಹೊಂಡದಲ್ಲಿ ಬಿದ್ದಿದೆ. ನೀರಿನಲ್ಲಿ ಬಿದ್ದ ಮೊಬೈಲ್ ತೆಗೆದುಕೊಳ್ಳಲು ಹೋಗಿ ಒಬ್ಬರ ಮೇಲೊಬ್ಬರು ಬಿದ್ದು ನಾಲ್ಕೂ ಮಕ್ಕಳು ಮೃತಪಟ್ಟಿದ್ದಾರೆ. ಸದ್ಯ ವಿಷಯ ತಿಳಿದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೋಳಿ ಮಕ್ಕಳ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಈ ಸಂಬAಧ ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಂಕರ ಭಜಂತ್ರಿ ಎಕ್ಸ್ ಪ್ರೆಸ್ ಟಿವಿ ಗೋಕಾಕ್