ಲಿಂಗಸುಗೂರು : ಕೋವಿಡ್-೧೯ ವೈರಸ್ ಭೀತಿ ಹಿನ್ನಲೆಯಲ್ಲಿ ಅನೇಕ ಬಡ ಕೂಲಿ ಕಾರ್ಮಿಕರು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರ ಬಡವರಿಗಾಗಿ ಉಚಿತ ಹಾಲು ವಿತರಣೆ ಮಾಡುತ್ತಿದೆ.ಆದರೆ ಪುರಸಭೆ ಅಧಿಕಾರಿಗಳು ಹಾಲು ವಿತರಣೆ ಮಾಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೌದು ರಾಯಚೂರು ಜಿಲ್ಲೆಯ ಲಿಂಗಸುಗೂರು ಪುರಸಭೆ ವ್ಯಾಪ್ತಿಯಲ್ಲಿ ನಾಲ್ಕು ದಿನಗಳಿಂದ ನಿತ್ಯ ಸಾವಿರ ಲೀಟರ್ ಹಾಲು ವಿತರಣೆ ಮಾಡಲಾಗುತ್ತಿದೆ. ಆರಂಭದಲ್ಲಿ ಇಡೀ ಪಟ್ಟಣಕ್ಕೆ ಹಾಲು ಹಂಚಿವುದಾಗಿ ತಿಳಿಸಿದ್ದ ಪುರಸಭೆ ಅಧಿಕಾರಿಗಳು ಬಳಿಕ ಗೌಳಿಪುರ ಪ್ರದೇಶಕ್ಕೆ ಮಾತ್ರ ವಿತರಿಸಿದ್ದರು. ಇದೀಗ ಸ್ಲಂ ನಿವಾಸಿಗಳಿಗೆ ಮಾತ್ರ ಹಾಲು ಹಂಚುವುದಾಗಿ ತಿಳಿಸಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣದ ಗೌಳಿಪುರ, ಸಂತೆ ಬಜಾರ್, ಜನತಾ ಕಾಲೋನಿ, ಪಿಂಚಣಿಪುರ ಪ್ರದೇಶಗಳಲ್ಲಿ ಪುರಸಭೆ ಸಿಬ್ಬಂದಿಗಳು ಜನರ ಮುಖ ನೋಡಿ ಹಾಲು ವಿತರಿಸುತ್ತಿರುವ ಆರೋಪ ಕೇಳಿ ಬಂದಿದ್ದು, ಈ ವಿಚಾರವಾಗಿ ಪುರಸಭೆ ಸದಸ್ಯೆ, ಸಿಬ್ಬಂದಿ ಹಾಗೂ ನಾಗರಿಕರ ಮಧ್ಯೆ ವಾಗ್ವಾದ ನಡೆದಿದೆ. ಉಚಿತ ಹಾಲು ವಾಸ್ತವವಾಗಿ ಬಡ ಫಲಾನುಭವಿಗಳಿಗೆ ತಲಪುತ್ತಿಲ್ಲ. ಪುರಸಭೆ ಅಧಿಕಾರಿಗಳು ಮರುಪರಿಶೀಲನೆ ಮಾಡಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು(ರಾಯಚೂರು)