ಅರಕಲಗೂಡು(ಹಾಸನ): ದುಷ್ಕರ್ಮಿಗಳು ಕೆರೆಗೆ ವಿಷ ಹಾಕಿದ ಪರಿಣಾಮ ನೂರಾರು ಮೀನುಗಳ ಮಾರಣ ಹೋಮವಾಗಿರುವ ಘಟನೆ ಅರಕಲಗೂಡು ತಾಲೂಕಿನ ಚಿಕ್ಕಗಾವನಗಳ್ಳಿ ಗ್ರಾಮದಲ್ಲಿ ನಡೆದಿದ್ದು,ಸದ್ಯ ಸತ್ತ ಮೀನುಗಳು ನೀರಿನಲ್ಲಿ ತೇಲುತ್ತಿದ್ದು ಗ್ರಾಮಸ್ಥರ ಮನಕಲುಕುವಂತಾಗಿದೆ.
ಅ0ದ ಹಾಗೇ ಊರ ಮುಂಭಾಗದ ಕೆರೆಗೆ ಗ್ರಾಮಸ್ಥರು ಒಟ್ಟಾಗಿ ಕಳೆದ ವರ್ಷ ಸುಮಾರು ೩೦ ಸಾವಿರ ವ್ಯಯಿಸಿ ವಿವಿಧ ತಳಿಯ ಮೀನು ಮರಿಗಳನ್ನು ಕೆರೆಗೆ ಬಿಟ್ಟಿದ್ದರು. ಆದರೆ ಬೆಳವಣಿಗೆ ಹಂತದಲಿದ್ದ ಮೀನುಗಳಿಗೆ ದುಷ್ಕರ್ಮಿಗಳು ವಿಷ ಹಾಕಿ ಕೊಂದು ಹಾಕಿದ್ದಾರೆ.
ಇನ್ನು ಕೆರೆಗೆ ಸುಮಾರು ೪೦ ಸಾವಿರ ಮೀನು ಮರಿಗಳನ್ನು ಬೆಳೆಸಲು ಬಿಡಲಾಗಿತ್ತು. ಎರಡು ದಿನಗಳ ಹಿಂದೆ ಕಿಡಿಗೇಡಿಗಳು ಕೆರೆಗೆ ಕಳೆನಾಶಕ ಹಾಕಿ ಮೀನುಗಳನ್ನು ಸಾಯಿಸಿದ್ದು ಅಪಾರ ನಷ್ಟವಾಗಿದೆ. ನಿತ್ಯವೂ ನೂರಾರು ಮೀನುಗಳು ಪ್ರಾಣ ಕಳೆದುಕೊಂಡು ನೀರಿನಲ್ಲಿ ಸತ್ತು ತೇಲುತ್ತಿವೆ.
ಇದೇ ವೇಳೆ ಒಂದೆರಡು ದಿನದಲ್ಲಿ ಮೀನುಗಳು ಪೂರ್ತಿಯಾಗಿ ಸಾಯಲಿವೆ. ಲಾಕ್ಡೌನ್ ನಿಂದಾಗಿ ಜನರು ಮೊದಲೇ ಆರ್ಥಿಕ ಸಂಕಷ್ಟಕ್ಕೀಡಾಗಿದ್ದು,ಇದೀಗ ಕೆರೆಯಲ್ಲಿದ್ದ ಜೀವಂತ ಮೀನುಗಳನ್ನು ಕಳೆದುಕೊಂಡು ಚಿಂತಿತರಾಗಿದ್ದೇವೆ ಎಂದು ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಸತ್ತ ಮೀನುಗಳನ್ನು ಕೆರೆ ದಡಕ್ಕೆ ತಂದು ಅಲ್ಲಲ್ಲಿ ರಾಶಿ ಹಾಕಲಾಗಿದ್ದು ದುರ್ವಾಸನೆ ಸೂಸುತ್ತಿವೆ.ಘಟನೆ ಕುರಿತು ಗ್ರಾಮಸ್ಥರು ಇಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ದೂರು ನೀಡಲು ನಿರ್ಧರಿಸಿದ್ದಾರೆ.
ಎ.ಎಸ್ ಸಂತೋಷ್ ಎಕ್ಸ್ ಪ್ರೆಸ್ ಟಿವಿ ಅರಕಲಗೂಡು(ಹಾಸನ)