ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ನಡೆದ ಸಿಆರ್ಪಿಎಫ್ ಯೋಧನ ಬಂಧನ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು,ಈ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಸಿಆರ್ಪಿಎಫ್ ಐಜಿಪಿ ಸಂಜಯ್ ಅರೋರಾ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಪತ್ರ ಬರೆದಿದ್ದಾರೆ.
ಅಂದ ಹಾಗೇ ಪತ್ರದಲ್ಲಿ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದಲ್ಲಿ ನಡೆದ ಸಿಆರ್ಪಿಎಫ್ ಯೋಧನ ಬಂಧನ ಪ್ರಕರಣ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸಿಆರ್ಪಿಎಫ್ ಐಜಿಪಿ ರಾಜ್ಯದ ಡಿಜಿ-ಐಜಿಪಿಗೆ ತಿಳಿಸಿದ್ದಾರೆ.
ಇನ್ನು ಯೋಧನನ್ನು ಬಂಧಿಸುವ ಮುನ್ನ ಸಿಆರ್ಪಿಎಫ್ ಮೇಲಧಿಕಾರಿಗಳ ಗಮನಕ್ಕೆ ಪೊಲೀಸರು ತರಬೇಕಿತ್ತು.ಆದರೆ,ಈ ಕೆಲಸ ಪೊಲೀಸರಿಂದ ಆಗಿಲ್ಲ ಎಂದು ಸಿಆರ್ಪಿಎಫ್ ಐಜಿಪಿ ಸಂಜಯ್ ಅರೋರಾ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.ಜೊತೆಗೆ ಪ್ರಕರಣ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ರಾಜ್ಯ ಡಿಜಿ-ಐಜಿಪಿಗೆ ಪತ್ರದ ಮೂಲಕ ಕೋರಿದ್ದಾರೆ.
ಈ ಹಿಂದೆ ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ಸದಲಗಾ ಪೊಲೀಸರು ಹಾಗೂ ಸಿಆರ್ಪಿಎಫ್ ಯೋಧನ ಮಧ್ಯೆ ವಾಗ್ವಾದ ಆಗಿತ್ತು. ಇದು ವಿಕೋಪಕ್ಕೆ ತಿರುಗಿದ್ದು, ಪೇದೆ ಮೇಲೆ ಯೋಧ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.ಅಲ್ಲದೆ, ಘಟನೆ ಹತ್ತಿಕ್ಕಲು ಮತ್ತೋರ್ವ ಪೇದೆ ಯೋಧನ ಮೇಲೆ ಲಾಠಿ ಚಾರ್ಜ್ ಮಾಡಿ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಳಗಾವಿ