ತಿಪಟೂರು: ತಾಲ್ಲೂಕಿನಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚುತ್ತಿರುವುದನ್ನು ನಿಯಂತ್ರಿಸಲು ಸಾರ್ವಜನಿಕರು ಸರ್ಕಾರದ ಜೊತೆ ಕೈಜೋಡಿಸಿದಾಗ ಮಾತ್ರ ಸಾಧ್ಯವೆಂದು ತಾಲ್ಲೂಕು ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಉಪವಿಭಾಗಾಧಿಕಾರಿ ಕೆ.ಆರ್.ನಂದಿನಿ ತಿಳಿಸಿದರು. ಇದುವರೆಗೂ ತಾಲ್ಲೂಕಿನಲ್ಲಿ ವಾರಕ್ಕೆ ಒಂಡೆರಡು ಪ್ರಕರಣಗಳು ಕಾಣಸಿಗುತ್ತಿದ್ದವು ಆದರೆ ಕಳೆದ ವಾರದಿಂದ ಒಂದೇ ದಿನದಲ್ಲಿ 4 ರಿಂದ 9 ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಇಂದು 9 ಪ್ರಕರಣಗಳು ಸೇರಿ 64 ಸೋಕಿತರಿದ್ದಾರೆ. ಈ ಸೋಂಕಿತರಲ್ಲಿ 27 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದು, ಸಕ್ರಿಯ ಸೋಂಕಿತರು 36 ಜನರಿದ್ದಾರೆಂದು ತಿಳಿಸಿದರು. ಕೊರೊನಾ ನಿಯಂತ್ರಣ ನಿಮ್ಮ ಕೈಯಲ್ಲೇ ಇದೆ, ಕೊರೊನಾ ಸೊಂಕಿನ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಸ್ಥಳೀಯ ಪ್ರಾಥಮಿಕ ಆಸ್ಪತ್ರೆ ಅಥವಾ ಸಾರ್ವಜನಿಕ ಆಸ್ಪತ್ರೆಯ ವೈದ್ಯರಿಗೆ ತೋರಿಸಿ ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಿ ಯಾವುದೇ ಲಕ್ಷಣವನ್ನು ನಿರ್ಲಕ್ಷಿಸಬೇಡಿ. ಕೋವಿಡ್ ನಿಯಂತ್ರಿಸಲು ನಿಮ್ಮ ಪಾತ್ರವು ಬಹಳ ಮುಖ್ಯವಾಗಿದ್ದು ಪ್ರತಿಯೊಬ್ಬರು ಈ ರೋಗದ ಬಗ್ಗೆ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ಸಾದ್ಯವಾದಷ್ಟು ಜನರಿಗೆ ತಿಳಿಸಿ ಮುಖ್ಯವಾಗಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಜೊತೆಗೆ ಅನಾವಶ್ಯಕವಾಗಿ ಹೊರಗಡೆ ಸುತ್ತಬೇಡಿ, ಕೊರೊನಾ ನಿಯಂತ್ರಣ ಸಂಪೂರ್ಣವಾಗಿ ನಿಮ್ಮ ಕೈಯಲ್ಲೇ ಇದ್ದು ಸರ್ಕಾರ ಪ್ರಕಟಿಸಿರುವ ಕೊರೊನಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಕೊರೊನಾ ನಿಯಂತ್ರಿಸಬೇಕೆಂದು ಸಾರ್ವಜನಿಕರಿಗೆ ಕರೆನೀಡಿದರು.
ಸಿದ್ದೇಶ್ವರ ಸಿ.ಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.