ಬೆಂಗಳೂರು: ಮುಂಗಾರು ಬೆಳೆ ಸಮೀಕ್ಷೆ ಶೇ.100 ರಷ್ಟು ಯಶಸ್ವಿಯಾದ ಬೆನ್ನಲ್ಲೆ ಕೃಷಿ ಇಲಾಖೆ ಮುಂಗಾರು ಬೆಳೆ ಸಮೀಕ್ಷೆ ನಡೆಸಿದ ಮಾದರಿಯಲ್ಲಿಯೇ ಹಿಂಗಾರು ಬೆಳೆ ಸಮೀಕ್ಷೆ ನಡೆಸಲು ತೀರ್ಮಾನಿಸಿದೆ. ಹಿಂಗಾರು ಬೆಳೆ ಸಮೀಕ್ಷೆ ಸಂಬಂಧ ಕೃಷಿ ಸಚಿವ ಬಿ.ಸಿ.ಪಾಟೀಲ್ ಇಲಾಖಾಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದರು. ವಿಕಾಸಸೌಧದ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರೈತರೇ ತಮ್ಮ ಬೆಳೆ ಜಮೀನಿನ ಸಮೀಕ್ಷೆಯನ್ನು ತಾವೇ ಆ್ಯಪ್ ಮೂಲಕ ನಡೆಸಿದ್ದು, ಇದೇ ಮಾದರಿಯಲ್ಲಿಯೇ ಹಿಂಗಾರು ಬೆಳೆ ಸಮೀಕ್ಷೆಯನ್ನು ಕೂಡ ಯಶಸ್ವಿಯಾಗಿ ನಡೆಸುವ ಬಗ್ಗೆ ಸಚಿವರು ಇಲಾಖಾಧಿಕಾರಿಗಳ ಜೊತೆ ಚರ್ಚಿಸಿದರು. ಮಾಸ್ಟರ್ಸ್ ಗಳಿಗೆ ಹಿಂಗಾರು ಬೆಳೆ ಸಮೀಕ್ಷೆ ಬಗ್ಗೆ ತರಬೇತಿ ನೀಡುವುದು, ಮಾಸ್ಟರ್ಸ್ ತರಬೇತುದಾರರಿಂದ ಖಾಸಗಿ ನಿವಾಸಿಗಳಿಗೆ (ಪಿಆರ್ ಓ) ರೈತರ ಬೆಳೆ ಸಮೀಕ್ಷೆ ಆ್ಯಪ್ ಬಗ್ಗೆ ತರಬೇತಿ ನೀಡಿ ಬಳಿಕ ಆ್ಯಪ್ ಮೂಲಕ ರೈತರೇ ತಮ್ಮ ಬೆಳೆ ಸಮೀಕ್ಷೆಯನ್ನು ತಾವೇ ನಡೆಸಲು ಕ್ರಮಕೈಗೊಳ್ಳುವುದು ಸೇರಿದಂತೆ ಮತ್ತಿತ್ತರ ವಿಷಯಗಳ ಕುರಿತು ಸಭೆಯಲ್ಲಿ ಮಾಹಿತಿ ಪಡೆಯಲಾಯಿತು.ಈ ಸಂದರ್ಭದಲ್ಲಿ ಮುಂಗಾರು ಬೆಳೆ ಸಮೀಕ್ಷೆ ಯಶಸ್ವಿಗೆ ಕೃಷಿ ಇಲಾಖೆ ಜೊತೆ ಸಹಕರಿಸಿದ ಕಂದಾಯ,ರೇಷ್ಮೆ, ತೋಟಗಾರಿಕೆ ಇಲಾಖೆಗೂ ಸಚಿವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.ಡಿಸೆಂಬರ್ ಮೊದಲ ವಾರದಲ್ಲಿ ಹಿಂಗಾರು ಬೆಳೆ ಸಮೀಕ್ಷೆ ರೈತರ ಆ್ಯಪ್ ಬಿಡುಗಡೆಯಾಗಲಿದ್ದು, ಶೀಘ್ರದಲ್ಲಿಯೇ ದಿನಾಂಕ ಪ್ರಕಟಿಸುವುದಾಗಿ ಹಾಗೂ ಮುಂಗಾರು ಬೆಳೆ ಸಮೀಕ್ಷೆ ಯಶಸ್ವಿಯಾದಂತೆ ಹಿಂಗಾರು ಬೆಳೆ ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕೆಂದು ಬಿ.ಸಿ.ಪಾಟೀ್ಲ್ ಮನವಿ ಮಾಡಿದ್ದಾರೆ. ಸಭೆಯಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಜಕುಮಾರ್ ಕತ್ರಿ, ನಿರ್ದೇಶಕ ಶ್ರೀನಿವಾಸ್,ಹೆಚ್ಚುವರಿ ನಿರ್ದೇಶಕ ಆ್ಯಂತೋನಿ ಎಂ. ಇಮ್ಯಾನುಲ್ ಸೇರಿದಂತೆ ಮತ್ತಿತ್ತರ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು