ಶಿರಾ(ತುಮಕೂರು): ಹಲವು ದಿನಗಳಿಂದ ಕಾಣೆಯಾಗಿದ್ದ ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಕೊರೊನಾ ಸಂಕಷ್ಟದ ನಡುವೆಯೂ ಇಂದು ಭರ್ಜರಿಯಾಗಿ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡಿದ್ದಾರೆ.
ಸದ್ಯ ಸಂಸದ ನಾರಾಯಣಸ್ವಾಮಿ ಹುಟ್ಟುಹಬ್ಬಕ್ಕೆ ಸಾರ್ವಜನಿಕರಿಂದಲೇ ಭಾರೀ ವಿರೋಧ ವ್ಯಕ್ತವಾಗಿದ್ದು, ಕೋವಿಡ್ -೧೯ ಸೆಕ್ಷನ್ ೧೪೪(೩) ಉಲ್ಲಂಘಿಸಿದಕ್ಕೆ ಸಂಸದರ ವಿರುದ್ಧ ಕ್ರಮ ಕೈಗೊಳ್ಳಿ ಎಂಬುದಾಗಿ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ವಿಪರ್ಯಾಸವೆಂದರೆ ಹುಟ್ಟುಹಬ್ಬ ಆಚರಿಸದಂತೆ ತಡೆಯಬೇಕಾಗಿದ್ದ ಪೊಲೀಸರೇ ಸಂಸದರಿಗೆ ಹೂಗುಚ್ಛ ನೀಡಿ ನಗುತ್ತಾ ಫೋಟೋಗೆ ಫೋಸ್ ನೀಡಿರುವುದು ಕೂಡ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ನಿನ್ನೆ ಜಯ ಕರ್ನಾಟಕ ವೇದಿಕೆಯ ರಾಜ್ಯಾಧ್ಯಕ್ಷ ಮುತ್ತಪ್ಪ ರೈ ಮೃತಪಟ್ಟ ಹಿನ್ನೆಲೆಯಲ್ಲಿ ಶಿರಾದಲ್ಲಿ ಕೆಲವು ಹದಿನೈದು ಮಂದಿ ಸಂತಾಪ ಸೂಚಕ ಸಭೆ ನಡೆಸಲು ಹೊರಟಾಗ ಸಂತಾಪ ಸೂಚಕ ಸಭೆ ನಡೆಸದಂತೆ ಪೊಲೀಸರು ಅವರನ್ನು ಚದುರಿಸಿದರು.
ಆದರೆ ಇಂದು ಸಂಸದ ನಾರಾಯಣಸ್ವಾಮಿ ಅವರ ಹುಟ್ಟುಹಬ್ಬವನ್ನು ಕೇಕ್ ಕತ್ತರಿಸಿ ನೂರಾರು ಜನರ ಸಮ್ಮುಖದಲ್ಲಿ ಬಿಜೆಪಿ ಕಾರ್ಯಕರ್ತರ ಜೊತೆಗೂಡಿ ಅದರಲ್ಲೂ ಆರಕ್ಷಕರ ಸಮ್ಮುಖದಲ್ಲಿಯೇ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೆ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದು ಎಷ್ಟರ ಮಟ್ಟಿಗೆ ಸರಿ?ನಮ್ಮ ಜಿಲ್ಲಾಧಿಕಾರಿ?,ತಾಲ್ಲೂಕು ದಂಡಾಧಿಕಾರಿ ಏನು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಶ್ರೀಮಂತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಶಿರಾ(ತುಮಕೂರು)