ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪುರಸಭೆ ಸದಸ್ಯೆಯರ ತಳ್ಳಾಟ-ನೂಕಾಟ ಪ್ರಕರಣ ತೇರದಾಳ ಶಾಸಕ ಸಿದ್ದು ಸವದಿಗೆ ಕಂಟಕವಾಗುವಂತೆ ಕಾಣುತ್ತಿದೆ. ಯಾಕೆಂದರೆ ಈ ಪ್ರಕರಣ ಸಂಬಂಧ ತೇರದಾಳ ಶಾಸಕ ಸಿದ್ದು ಸವದಿ ಸೇರಿ 31 ಜನರ ವಿರುದ್ಧ ಕೇಸ್ ದಾಖಲಾಗಿದೆ. ಬಾಗಲಕೋಟೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ. ಹೀಗಾಗಿ ತೇರದಾಳ ಶಾಸಕ ಸಿದ್ಧು ಸವದಿಗೆ ಈ ಪ್ರಕರಣ ಕಂಟಕವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಳೆದ ವರ್ಷ ಅಂದರೆ 2020ರ ನವೆಂಬರ್ 09ರಂದು ಈ ತಳ್ಳಾಟ-ನೂಕಾಟ ಘಟನೆ ನಡೆದಿತ್ತು. ಅಂದು ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು. ಈ ವೇಳೆ ವೋಟ್ ಮಾಡಲು ಬಂದ ಪುರಸಭೆ ಸದಸ್ಯೆ ಚಾಂದಿನಿ ನಾಯಕ್, ಸವಿತಾ ಹುರಕಡ್ಲಿ, ಗೋದಾವರಿ ಬಾಟ್ ಅವರನ್ನು ತಳ್ಳಾಡಿ ನೂಕಾಡಲಾಗಿತ್ತು. ಪುರಸಭೆಯ ಒಳಗೆ ಬಾರದಂತೆ ಹೊರಗಡೆ ಕಳಿಸಲು ಗಲಾಟೆ ನಡೆದಿತ್ತು.ಘಟನೆ ಬಳಿಕ ಚಾಂದಿನಿ ನಾಯಕ್ ಅವರು ದೂರು ದಾಖಲಿಸಿದ್ದರು. ಇಷ್ಟೇ ಅಲ್ಲದೇ, ತಳ್ಳಾಟದ ಬಳಿಕ ಮೂರು ತಿಂಗಳ ಗರ್ಭಿಣಿ ಚಾಂದಿನಿ ನಾಯಕ್ಗೆ ಗರ್ಭಪಾತವಾಗಿದೆ ಎಂಬ ಆರೋಪವೂ ಸಹ ಕೇಳಿ ಬಂದಿದೆ. ಈ ಸಂಬಂಧ ತೇರದಾಳ ಶಾಸಕ ಸಿದ್ದು ಸವದಿ, ಬೆಂಬಲಿಗರಾದ ರವಿ ಜವಳಗಿ, ಪ್ರಹ್ಲಾದ್ ಸಣ್ಣಕ್ಕಿ, ರಾಜು ಚಮಕೇರ, ಸ್ನೇಹಲ್ ಅಂಗಡಿ ಸೇರಿದಂತೆ 31 ಜನರ ವಿರುದ್ಧ ದೂರು ದಾಖಲಾಗಿದೆ.ಗೌರವಕ್ಕೆ ಧಕ್ಕೆ, ಅಪಹರಣ, ಜೀವ ಬೆದರಿಕೆ, ಜಾತಿ ನಿಂದನೆ ಕೇಸ್ ದಾಖಲಿಸಲಾಗಿದೆ. ಸೆಕ್ಷನ್ 120/a,141, 143, 147, 148, 319, 321, 323, ಜಾತಿ ನಿಂದನೆ ಸೇರಿದಂತೆ 19 ಸೆಕ್ಷನ್ ಅಡಿ ಕೇಸ್ ದಾಖಲು ಮಾಡಲಾಗಿದೆ.
ವರದಿ- ಶ್ಯಾಮ ತಳವಾರ ಎಕ್ಸ್ ಪ್ರೆಸ್ ಟಿವಿ ಜಮಖಂಡಿ