ಹಾವೇರಿ : ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಕೈತಪ್ಪಿರುವ ಹಿನ್ನೆಲೆಯಲ್ಲಿ ಹಿರೇಕೆರೂರು ಕಾಂಗ್ರೆಸ್ ಶಾಸಕ ಬಿ.ಸಿ. ಪಾಟೀಲ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾವೇರಿ ಜಿಲ್ಲೆಯಾದ್ಯಂತ ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕಾಗಿ ಶ್ರಮಿಸಿದ್ದೇನೆ. ಮೂರು ಜಿಲ್ಲೆಗಳಲ್ಲಿ ಲಿಂಗಾಯತ ಕಾಂಗ್ರೆಸ್ ಶಾಸಕರು ಇಲ್ಲ. ಹೀಗಾಗಿ ಸಾದರ ಲಿಂಗಾಯತರನ್ನು ಬಿಟ್ಟು ಸಚಿವ ಸಂಪುಟ ರಚಿಸಲಾಗಿದೆ ಎಂದಿದ್ದಾರೆ.
ಹಿರೇಕೆರೂರು ತಾಲೂಕಿಗೆ 38 ವರ್ಷಗಳಿಂದ ಸಚಿವ ಸ್ಥಾನ ಸಿಕ್ಕಿಲ್ಲ. ತುಂಬಾ ಬೇಜಾರಾಗಿದೆ. ನನ್ನ ಗಾಡ್ ಫಾದರ್ ಸಿದ್ದರಾಮಯ್ಯ, ನಾನು ಸಿದ್ದರಾಮಯ್ಯರನ್ನು ನಂಬಿಕೊಂಡಿದ್ದೆ, ಅವರು ಮುಖ್ಯಮಂತ್ರಿ ಮಾಡಲು ಧ್ವನಿ ಎತ್ತಿದವರಲ್ಲಿ ನಾನು ಮೊದಲಿಗ, ಆದರೆ ಸಿದ್ದರಾಮಯ್ಯ ನನ್ನ ಕೈ ಬಿಟ್ಟಿದ್ದಾರೆ. ನನ್ನ ಜೊತೆ ಕಾಂಗ್ರೆಸ್ ಪಕ್ಷದ ಮುಖಂಡರು ಯಾರೂ ಮಾತನಾಡಿಲ್ಲ. ಮುಂದಿನ ನಡೆ ಕಾದು ನೋಡಿ, ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರಲ್ಲ ಎಂದು ಹೇಳಿದರು.