ಚಿಕ್ಕಬಳ್ಳಾಪುರ

ವೃತ್ತಿ ಬದುಕಿನ ಹಿನ್ನೆಲೆಯ ಅನುಭವ ಸಾಹಿತ್ಯವಾಗುತ್ತಿದೆ- ಸಾಹಿತಿ ಧನಪಾಲ್ ನಾಗರಾಜಪ್ಪ

Published

on

ಬದುಕಿನ ಹಿನ್ನೆಲೆಯ ಅನುಭವ ಸಾಹಿತ್ಯವಾಗುತ್ತಿದೆ – ಸಾಹಿತಿ ಧನಪಾಲ್ ನಾಗರಾಜಪ್ಪ ನೆಲವಾಗಿಲು

ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ಕನ್ನಡ ಸಾರಸ್ವತ ಪರಿಚಾರಿಕೆ ಶಿಡ್ಲಘಟ್ಟ ತಾಲ್ಲೂಕು ಮತ್ತು ಕೇಂದ್ರ ಗ್ರಂಥಾಲಯ ಸಹಯೋಗದಲ್ಲಿ ನಡೆದ “ಓದಿನ ಅರಮನೆಯಲ್ಲಿ ಪುಸ್ತಕ ಪರಿಚಯ” ೧೬ ನೇ ತಿಂಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಹಿತಿ ಧನಪಾಲ್ ನಾಗರಾಜಪ್ಪ ನೆಲವಾಗಿಲು ಮಾತನಾಡಿದರು.

ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವವರು ತಮ್ಮ ವೃತ್ತಿ ಬದುಕಿನ ಹಿನ್ನೆಲೆಯ ಅನುಭವವನ್ನು ಬರೆಯುವ ಮೂಲಕ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ತಮ್ಮದೇ ಆದ ರೀತಿಯಲ್ಲಿ ಕಾಣಿಕೆ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು.

ಹೆಸರು ಗಳಿಸಲು ಮತ್ತು ಕೀರ್ತಿಯನ್ನು ಬೆನ್ನತ್ತಿ ಸಾಹಿತ್ಯ ರಚನೆ ಅಥವಾ ಪುಸ್ತಕ ಮಾಡಬಾರದು. ಉಪಯುಕ್ತ ಸಾಹಿತ್ಯ ರಚನೆಯಾಗಬೇಕು. ಓದುಗರು ತಾವು ಓದಿದ ಇಷ್ಟವಾದ ಪುಸ್ತಕದ ಬಗ್ಗೆ ತಮ್ಮ ಅನಿಸಿಕೆ ಬರೆಯಬೇಕು. ಇದು ಮತ್ತಷ್ಟು ಮಂದಿಗೆ ಓದಲು ಪ್ರೇರಣೆ ನೀಡುತ್ತದೆ. ಸಾಹಿತಿಗೆ ಇದಕ್ಕಿಂತ ಹೆಚ್ಚಿನ ಬಹುಮಾನ ಬೇರೆ ಬೇಕಿಲ್ಲ. ಜನರ ಬದುಕನ್ನು ಹಸನುಗೊಳಿಸುವಲ್ಲಿ ದುಡಿಯುವ, ಎಲೆ ಮರೆಯ ಕಾಯಿಯಂತಹ ಪ್ರಾಮಾಣಿಕ ಜನರನ್ನು ಗುರುತಿಸಬೇಕು ಮತ್ತು ಗೌರವಿಸಬೇಕು ಎಂದರು.

ರಾಜ್ಯದಲ್ಲಿ ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣದ ಮಾಧ್ಯಮ ಕನ್ನಡವೇ ಆಗಿರಬೇಕು. ಜೊತೆಗೆ ಒಂದನೇ ತರಗತಿಯಿಂದಲೇ ಇಂಗ್ಲೀಷ್ ಅನ್ನು ಭಾಷಾ ವಿಷಯವಾಗಿ ಪ್ರಾಮಾಣಿಕವಾಗಿ, ಪರಿಣಾಮಕಾರಿಯಾಗಿ ಕಲಿಸಬೇಕು ಎಂದು ಹೇಳಿದರು.

ತೆಲುಗಿನ ಲೇಖಕ ಸಲೀಂ ಅವರ ಹಲವು ಕಥೆ, ಕಾದಂಬರಿಗಳನ್ನು ಅನುವಾದಿಸಿದ್ದೇನೆ. ಜನಪರ ಆಶಯ, ಮುಸ್ಲಿಂ ಹೆಣ್ಣು ಮಕ್ಕಳ ಬದುಕು, ಬವಣೆ, ಒಳಮನಸ್ಸಿನ ಬೇಗುದಿ, ಗೊಂದಲ, ತಾಕಲಾಟ, ಜ್ವಲಂತ ಸಮಸ್ಯೆ ಮತ್ತು ಅದಕ್ಕೆ ಪರಿಹಾರೋಪಾಯಗಳು ಇವುಗಳಲ್ಲಿದೆ. ಎರಡು ಮಕ್ಕಳ ಕಾದಂಬರಿಗಳನ್ನು ಬರೆದಿದ್ದೇನೆ. ಮಕ್ಕಳು ತಮ್ಮ ಸಹಜವಾದ ಬಾಲ್ಯವನ್ನು ಅನುಭವಿಸಬೇಕು, ಟೀವಿ, ಮೊಬೈಲ್ ಗಳ ಆಕರ್ಷಣೆಗೆ ಒಳಗಾಗಿ ಅವರ ಸ್ವಭಾವ ಬದಲಾಗುತ್ತಿದೆ. ಮಕ್ಕಳ ಮನಸ್ಸನ್ನು ಅರಳಿಸುವ, ಕುತೂಹಲ ಮತ್ತು ಕ್ರಿಯಾಶೀಲತೆ ಬೆಳೆಸುವ ಕೆಲಸವಾಗಬೇಕು ಎಂದು ನುಡಿದರು.

ಕನ್ನಡ ಸಾರಸ್ವತ ಪರಿಚಾರಿಕೆ ಅಧ್ಯಕ್ಷ ಬಿ.ಆರ್‌.ಅನಂತಕೃಷ್ಣ ಸ್ಥಳೀಯ ಲೇಖಕರನ್ನು ಪರಿಚಯಿಸುವ ಕಾರ್ಯಕ್ರಮಗಳನ್ನು ನಿರಂತರವಾಗಿ ಮಾಡುತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಾಹಿತಿ ಧನಪಾಲ್ ನಾಗರಜಪ್ಪ ನೆಲವಾಗಿಲು ಅವರು ತಮ್ಮ “ಅಪರಾಜಿತ”, “ಮೇಧ ೦೧೭”, “ನಿವೇದನೆ”, “ತಣ್ಣೀರ ಬಟ್ಟೆಯ ಬಿಸಿ” ಪುಸ್ತಕಗಳನ್ನು ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎ.ಎಂ.ತ್ಯಾಗರಾಜ್‌, ಕಾರ್ಯದರ್ಶಿ ಸತೀಶ್‌, ಗ್ರಂಥಪಾಲಕ ಬಚ್ಚರೆಡ್ಡಿ, ಸಿಬ್ಬಂದಿ ಬಾಂಧವ್ಯ, ಚಲನಚಿತ್ರ ನಟ ಸಿ.ಎನ್‌.ಮುನಿರಾಜು, ನಿವೃತ್ತ ಶಿಕ್ಷಕ ಸುಂದರನ್‌, ಅಜಿತ್‌ ಕೌಂಡಿನ್ಯ, ವಿ.ವೆಂಕಟರಮಣ, ಹುಜಗೂರು ಕೆಂಪೇಗೌಡ, ಅನಿಲ್ ಪದ್ಮಸಾಲಿ, ಜಸ್ಮಿತಾ ಡಾನ್ಸ್ ಅಕಾಡೆಮಿಯ ಮಾನಸ್ ಧನುಶ್ರೀ, ಲಿಟಲ್ ಸ್ಟಾರ್ ಡಾನ್ಸ್ ಗ್ರೂಪ್ ಮನೋಜ್, ಮುನಿಯಪ್ಪ, ಕೃಷ್ಣಪ್ಪ, ವೈಶಾಖ್, ಶ್ರೀನಾಥ್, ಗೋಪಾಲಕೃಷ್ಣ, ಸತ್ಯನಾರಾಯಣ್ ಹಾಜರಿದ್ದರು.

Click to comment

Trending

Exit mobile version