ಬಾಗಲಕೋಟೆ : ಉತ್ತರ ಕರ್ನಾಟಕ ಹೋರಾಟ ಸಮಿತಿಯಿಂದ ಮುಧೋಳ ನಗರದಲ್ಲಿ ಪ್ರತ್ಯೇಕ ರಾಜ್ಯದ ಧ್ವಜಾರೋಹಣ ನೆರವೇರಿಸಲಾಗಿದೆ.
ಮುಧೋಳ ನಗರದಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿ ಸದಸ್ಯರು ಪ್ರತ್ಯೇಕ ರಾಜ್ಯಕ್ಕಾಗಿ ಕರ್ನಾಟಕ ಧ್ವಜವನ್ನು ಬಿಟ್ಟು ಹೊಸ ಧ್ವಜವನ್ನು ರಚಿಸಿ ಧ್ವಜಾರೋಹಣ ನಡೆಸಿದ್ದಾರೆ. ಇಂದು ಬೆಳಗ್ಗೆ 9 ಗಂಟೆಗೆ ಉತ್ತರ ಕರ್ನಾಟಕ ಹೋರಾಟ ಸಮಿತಿ ಉಪಕಚೇರಿ ಆವರಣದಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿದೆ.
ಪ್ರತ್ಯೇಕ ರಾಜ್ಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ನಾಗೇಶ್ ಗೋಲಶೆಟ್ಟಿ ಸೇರಿದಂತೆ ಇತರೇ ಹೋರಾಟಗಾರರು ಪಾಲ್ಗೊಂಡಿದ್ದರು.
ಸೆ. 23 ರಂದು ಬಾಗಲಕೋಟದಲ್ಲಿ ಸಭೆ ನಡೆಸಿದ್ದ ಸಮಿತಿ ಜನವರಿ 1 ರಂದು ಪ್ರತ್ಯೇಕ ರಾಜ್ಯ ಧ್ವಜಾರೋಹಣ ನೆರವೇರಿಸಿ ರಾಜ್ಯೋತ್ಸವ ಆಚರಿಸುವುದಾಗಿ ಘೋಷಿಸಿತ್ತು. ಜೊತೆಗೆ ನೀಲಿ ಬಣ್ಣದಲ್ಲಿ ಉತ್ತರ ಕರ್ನಾಟಕ ನಕ್ಷೆ ಹೊಂದಿದ್ದ ವಿನ್ಯಾಸದ ಧ್ವಜ ಹಾಗೂ ಬಾಗಲಕೋಟವನ್ನು ಹೊಸ ರಾಜ್ಯದ ರಾಜಧಾನಿಯಾಗಿ ಘೋಷಿಸಲಾಗಿತ್ತು.