ಧಾರವಾಡ: ಡೆಡ್ಲಿ ಕೊರೊನಾದಿಂದಾಗಿ ಇಡೀ ರಾಷ್ಟ್ರವೇ ಲಾಕ್ಡೌನ್ ಆದ ಹಿನ್ನಲೆಯಲ್ಲಿ ಕೆಲ ಜನರು ತಮ್ಮ ಸ್ಥಳಕ್ಕೆ ಹೋಗದೆ ಸಿಲುಕಿಕೊಂಡಿದ್ದಾರೆ. ಇದೇ ರೀತಿ ಲಾರಿ ಚಾಲಕರು ಪಾಡು ಕೂಡ ಹೇಳತೀರದಾಗಿದೆ.
ಆದ್ರೆ ಇಲ್ಲೊಬ್ಬ ಮಹಿಳಾ ಪೊಲೀಸ್ ಅಧಿಕಾರಿ ಆ ಚಾಲಕರ ಸಂಕಷ್ಟ ಅರಿತು ಅವರಿಗೆ ಊಟದ ವ್ಯವಸ್ಥೆ ಮಾಡಿ ಎಲ್ಲರಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ.
ಹೌದು, ಧಾರವಾಡ ಜಿಲ್ಲೆಯ ಎಸ್ಪಿ ವರ್ತಿಕಾ ಕಟಿಯಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿಲುಕಿಕೊಂಡ ನೂರಾರು ಲಾರಿ ಚಾಲಕರಿಗೆ ಊಟದ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಅಂದ ಹಾಗೇ ಹುಬ್ಬಳ್ಳಿ ತಾಲೂಕಿನ ವರೂರ ಗ್ರಾಮದ ಬಳಿ ಹಾಕಿದ ಚೆಕ್ಪೋಸ್ಟ್ನಲ್ಲಿ ಲಾರಿ ಚಾಲಕರಿಗೆ ಊಟದ ವ್ಯವಸ್ಥೆ ಮಾಡಿದ್ದು,ಇದರಿಂದ ಚಾಲಕರ ಸಂಕಷ್ಟ ದೂರಾಗಿದೆ.
ಇನ್ನು ಲಾಕ್ಡೌನ್ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೋಟೆಲ್ ಮತ್ತು ಡಾಬಾಗಳು ಸಂಪೂರ್ಣ ಬಂದ್ ಆಗಿದ್ದರಿಂದ ಊಟ ಸಿಗದೆ ಲಾರಿ ಚಾಲಕರು ಪರದಾಡುತ್ತಿದ್ದರು. ಹೀಗಾಗಿ ಇದನ್ನರಿತ ಎಸ್ಪಿ ವರ್ತಿಕಾ ಖುದ್ದಾಗಿ ತಾವೇ ಮುಂದೆ ನಿಂತು ಧಾರವಾಡ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಎರಡೂ ಚೆಕ್ಪೋಸ್ಟ್ನಲ್ಲಿ ಲಾರಿ ಚಾಲಕರಿಗೆ ಊಟದ ವ್ಯವಸ್ಥೆ ಮಾಡಿದ್ದಾರೆ.
ಇನ್ನು ಎಸ್ಪಿ ಮಾಡಿದ ಕಾರ್ಯಕ್ಕೆ ಲಾರಿ ಚಾಲಕರು ಅಭಿನಂದನೆ ಸಲ್ಲಿಸಿದ್ದಾರೆ.