ಬೆಂಗಳೂರು/ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಇಡೀ ದೇಶವೇ ಕೈ ಜೋಡಿಸಿದೆ. ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ನೈತಿಕ ಬಲ ತುಂಬಲು ಹಾಗೂ ೨೧ ದಿನಗಳ ಲಾಕ್ಡೌನ್ನಿಂದ ಕಂಗೆಟ್ಟಿರುವ ಜನರಿಗೆ ಆತ್ಮಸ್ಥೈರ್ಯ ಮೂಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೀಪ ಅಭಿಯಾನಕ್ಕೆ ಕರೆ ನೀಡಿದ್ದರು. ಇದಕ್ಕೆ ದೇಶದಾದ್ಯಂತ ಸಖತ್ ಬೆಂಬಲ ವ್ಯಕ್ತಪಡಿಸಿದೆ.
ಅದರಲ್ಲೂ ಇಂದು ಸರಿಯಾಗಿ ಒಂಭತ್ತು ಗಂಟೆಗೆ ದೇಶದಾದ್ಯಂತ ಪ್ರಮುಖ ನಾಯಕರು, ಗಣ್ಯರು ಸೇರಿ ಸಮಸ್ತ ಭಾರತೀಯರು ದೀಪ ಬೆಳಗಿಸಿ ಕೊರೊನಾ ವಿರುದ್ಧ ಸಂಘಟಿತ ಹೋರಾಟಕ್ಕೆ ಮುನ್ನಡಿ ಬರೆದಿದ್ದಾರೆ. ಇನ್ನೊಂದೆಡೆ ದೇಶದ ಪ್ರತಿ ರಾಜ್ಯದ ಜನರೂ ಕೂಡಾ ತಮ್ಮ ಮನೆಯ ಲೈಟ್ ಆಫ್ ಮಾಡಿ ದೀಪ ಬೆಳಗಿ ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ಅಂದ ಹಾಗೇ ಕರ್ನಾಟಕದಲ್ಲೂ ಬೆಳಕಿನ ಒಗ್ಗಟ್ಟು ಪ್ರದರ್ಶನವಾಗಿದೆ. ಸಿಎಂ ಬಿಎಸ್ವೈ, ಪುನೀತ್ ರಾಜ್ಕುಮಾರ್, ನಟ ಶಿವರಾಜ್ ಕುಮಾರ್, ಸಚಿವ ಸುರೇಶ್ ಅಂಗಡಿ, ಹೆಚ್. ಡಿ.ರೇವಣ್ಣ, ಜಗದೀಶ್ ಶೆಟ್ಟರ್, ಗಾಯಕ ವಿಜಯ್ ಪ್ರಕಾಶ್, ನಟ ಅರ್ಜುನ್ ಸರ್ಜಾ ಸೇರಿದಂತೆ ಎಲ್ಲರೂ ಬೆಳಕು ಹಚ್ಚಿ ಕೊರೊನಾ ವಿರುದ್ಧ ಸಮರ ಸಾರಿದ್ದಾರೆ.
ಇದಲ್ಲದೆ ರಾಜ್ಯದ ನಾಗರಿಕರೆಲ್ಲಾ ದೀಪ ಬೆಳಗಿ ಕೊರೊನಾ ವಿರುದ್ಧದ ಹೋರಾಟಕ್ಕೆ ಮುನ್ನುಡಿ ಬರೆದಿದ್ದಾರೆ.
ದೇಶಾದ್ಯಂತ ಮನೆಗಳಲ್ಲೇ ಉಳಿದಿರುವ ಜನರು ತಮ್ಮ ತಮ್ಮ ಮನೆಗಳ ವಿದ್ಯುತ್ ಆರಿಸಿ ಮನೆ ಮುಂದೆ ದೀಪ ಬೆಳಗಿದರು. ದೀಪದ ಬೆಳಕಿನಲ್ಲಿ ತಮಗೆ ತಾವೇ ಸಾಂತ್ವನ ಹೇಳಿಕೊಳ್ಳುವ ಮೂಲಕ, ಕೊರೊನಾ ವೈರಸ್ ವಿರುದ್ಧದ ಹೋರಾಟಕ್ಕೆ ನವ ಚೈತನ್ಯ ತುಂಬಿದರು. ಎಣ್ಣೆ ದೀಪಗಳು, ಕ್ಯಾಂಡಲ್, ಟಾರ್ಚ್, ಮೊಬೈಲ್ ಫ್ಲಾಷ್ ಲೈಟ್ ಸೇರಿದಂತೆ ತಮಗೆ ಲಭ್ಯವಿರುವ ಎಲ್ಲ ಸಾಧನಗಳನ್ನೂ ಜನರು ಬಳಸಿದರು.
ಒಟ್ಟಾರೆಎ ಕೊರೊನಾ ವೈರಸ್ ವಿರುದ್ಧ ಹೋರಾಟ ಮಾಡುತ್ತಿರುವ ವೈದ್ಯರು, ನರ್ಸ್ ಹಾಗೂ ಪೊಲೀಸರು ಸೇರಿದಂತೆ ಎಲ್ಲ ರೀತಿಯ ಸಿಬ್ಬಂದಿಗಳಿಗೆ ಧನ್ಯವಾದಗಳನ್ನು ಅರ್ಪಿಸಲಾಯಿತು.