ಆರೋಗ್ಯ / HEALTH

ಕೊರೊನಾದಿಂದ ಅಲ್ಲ, ಊಟ ಸಿಗದೆ ಜನ ಸಾಯ್ತಾರೆ..ಹುಷಾರ್..

Published

on

ಹಾಸನ: ದೇಶವೇ ಲಾಕ್‌ಡೌನ್ ಆಗಿರುವುದರಿಂದ ಬಡವರು, ಕೂಲಿ ಕಾರ್ಮಿಕರು, ನಿರ್ಗತಿಕರು ಕೆಲಸವಿಲ್ಲದೇ ಒಂದು ಹೊತ್ತು ಊಟಕ್ಕೂ ಪರದಾಡುವ ಪರಿಸ್ಥಿತಿ ಬಂದಿದೆ.ಇದು ಹೀಗೆ ಮುಂದುವರೆದರೇ ಮುಂದಿನ ದಿನಗಳಲ್ಲಿ ಕೊರೊನಾ ವೈರಸ್‌ನಿಂದ ಜನರು ಸಾಯುವುದಿಲ್ಲ. ಆದರೆ ಊಟವಿಲ್ಲದೆ ಹೆಚ್ಚು ಜನ ಸಾಯುತ್ತಾರೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ ಜಿಲ್ಲೆಯಲ್ಲಿ ಕಳೆದ ೨೧ ದಿನಗಳಿಂದ ಬೀದಿ ವ್ಯಾಪಾರ, ಹೂ, ಹಣ್ಣು, ತರಕಾರಿ ಸಂತೆ, ಕೂಲಿ ಕಾರ್ಮಿಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಅಲ್ಲದೆ ತಮ್ಮ ಹೊಟ್ಟೆಪಾಡಿಗೆ ದುಡಿಯಲು ಹೋಗಿದ್ದ ನೌಕರರು ಜಿಲ್ಲೆಗೆ ಹಿಂತಿರುಗಿ ಬಂದಿದ್ದಾರೆ ಎಂದರು.
ಅಲ್ಲದೆ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು, ಟ್ಯಾಕ್ಸಿ ಚಾಲಕರು ಸೇರಿ ಜಿಲ್ಲೆಗೆ ಸುಮಾರು ೫೦ ಸಾವಿರ ಮಂದಿ ಬಂದಿರುವ ನಿರೀಕ್ಷೆ ಇದೆ. ಇವರ ಪರಿಸ್ಥಿತಿ ಸಂಕಷ್ಟದಲ್ಲಿದೆ. ಇದರ ಬಗ್ಗೆ ನಿರ್ಲಕ್ಷ್ಯ ವಹಿಸದೆ ಕೂಡಲೇ ಪರಿಗಣಿಸಿ ಪರಿಹಾರ ನೀಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.ಹಾಸನ ಜಿಲ್ಲಾಧಿಕಾರಿಗೆ ಖಾತೆಗೆ ೫ ಕೋಟಿ ಹಣವನ್ನು ಪರಿಹಾರವನ್ನಾಗಿ ನೀಡಿ ಜನತೆಗೆ ತಲುಪಿಸುವಂತೆ ಮಾಡಬೇಕು. ಜಿಲ್ಲಾಧಿಕಾರಿಗಳಿಗೆ ಕೊವಿಡ್-೧೯ನ ಅನುದಾನದ ಹಣವನ್ನು ಸರ್ಕಾರ ನೀಡಿದೆ. ಆದರೆ ಜಿಲ್ಲಾಧಿಕಾರಿಗಳಿಗೆ ಯಾವುದೇ ಶಿಷ್ಟಾಚಾರ ನೀಡದ ಹಿನ್ನೆಲೆಯಲ್ಲಿ ಹಣವನ್ನು ಟ್ರಜರಿಯಲ್ಲೇ ಇಟ್ಟು ಪೂಜೆ ಮಾಡುವಂತಾಗಿದೆ. ಅಲ್ಲೇ ಇಟ್ಟುಕೊಂಡು ಧೂಪ ಹಾಕಲಿ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಹಾಸನ

Click to comment

Trending

Exit mobile version