ಸಿರುಗುಪ್ಪ(ಬಳ್ಳಾರಿ): ಜಿಲ್ಲೆಯ ಸಿರುಗುಪ್ಪ ಎಪಿಎಂಸಿ ಮಾರುಕಟ್ಟೆಯಲ್ಲಿ ರೈತರಿಂದ ಭತ್ತ ಖರೀದಿ ಮಾಡಲು ಸರ್ಕಾರ ಭತ್ತ ಖರೀದಿ ಕೇಂದ್ರ ಸ್ಥಾಪಿಸಿದೆ.ಆದರೆ ಭತ್ತ ಖರೀದಿ ಕೇಂದ್ರದಲ್ಲಿ ಒಂದು ದಿನಕ್ಕೆ ಕೇವಲ ೪೦ ಕ್ವಿಂಟಲ್ ಭತ್ತ ಖರೀದಿ ಮಾಡಲು ಅವಕಾಶ ಇದೆ ಎಂದು ಅಧಿಕಾರಿಗಳು ಹೇಳುತ್ತಿದ್ದು,ಇದು ರೈತರನ್ನು ಚಿಂತೆಗೀಡು ಮಾಡಿದೆ.
ಹೀಗಾಗಿ ಹೆಚ್ಚಿನ ಭತ್ತ ಖರೀದಿ ಮಾಡಬೇಕೆಂದು ರೈತರು ಮತ್ತು ರೈತ ಮುಖಂಡರು ಅಧಿಕಾರಿಗಳ ವಿರುದ್ದ ಪ್ರತಿಭಟನೆ ನಡೆಸಿದರು.
ಈ ವೇಳೆ ರೈತ ಮುಖಂಡ ಆರ್.ಮಾಧವ ರೆಡ್ಡಿ ಮಾತನಾಡಿ, ಕಳೆದ ೪ ನಾಲ್ಕು ತಿಂಗಳ ಹಿಂದೆ ನಮ್ಮ ಸಂಘಟನೆಯ ಹೋರಾಟದಿಂದ ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.
ಸಿರುಗುಪ್ಪ ತಾಲೂಕಿನ ಸುಮಾರು ೪೦ ರಿಂದ ೪೫ ರೈತರು ತಾವು ಬೆಳೆದ ಭತ್ತವನ್ನು ಸ್ಥಳೀಯ ಭತ್ತ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಲು ನೊಂದಣಿ ಮಾಡಿಸಿದ್ದು,ಶ್ಯಾಂಪಲ್ ಭತ್ತವನ್ನು ತಂದು ಅಧಿಕಾರಿಗಳಿಗೆ ಕೊಟ್ಟಿದ್ದಾರೆ.ಅಲ್ಲದೆ,ರೈತರು ತಂದಿರುವ ಭತ್ತವನ್ನು ಪರೀಕ್ಷಿಸಿ ಮಾರಾಟ ಮಾಡಲು ಯೋಗ್ಯವಾಗಿವೆ ಎಂದು ಅಧಿಕಾರಿಗಳು ಪ್ರಮಾಣಪತ್ರವನ್ನು ನೀಡಿದ್ದರು.ಆದರೆ ಸರ್ಕಾರ ನಿಗದಿ ಪಡಿಸಿದ ಅಕ್ಕಿ ಗಿರಣಿಗಳಿಗೆ ರೈತರು ಭತ್ತ ಕೊಂಡೊಯಿದಾಗ ಅಕ್ಕಿ ಗಿರಣಿ ಮಾಲೀಕರು, ನೀವು ತಂದಿರುವ ಭತ್ತ ಯೋಗ್ಯ ವಾಗಿಲ್ಲ, ಕಂದು ಬಣ್ಣಕ್ಕೆ ತಿರುಗಿವೆ, ಅಕ್ಕಿ ನುಚ್ಚಾಗುತ್ತಿವೆ ಹೀಗೆ ಹಲವಾರ ಕಾರಣಗಳನ್ನು ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇದೇ ವೇಳೆ ರೈತ ಮುಖಂಡರು ಖರೀದಿ ಕೇಂದ್ರಕ್ಕೆ ಬಂದು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿ ಇದು ಹೀಗೆ ಮುಂದುವರಿದರೆ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಈ ವಿಚಾರವಾಗಿ ಅಧಿಕಾರಿ ಸಿಕಂದರ್ ಭಾಷ, ಮಿಲ್ ಮಾಲೀಕರಿಗೆ ಭತ್ತ ಖರೀದಿಸಲು ಪ್ರಮಾಣಪತ್ರ ನೀಡಲಾಗಿದೆ.ಆದರೆ ಭತ್ತ ಖರೀದಿಸಲು ಮಾಲೀಕರು ಹಿಂದೇಟು ಹಾಕುತ್ತಿದ್ದು,ಹಲವಾರು ಕಾರಣಗಳನ್ನು ನೀಡುತ್ತಿದ್ದಾರೆ.ಇದರ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ ರೈತರಿಗೆ ಭತ್ತ ಮಾರಾಟ ಮಾಡಲು ಅನುಕೂಲಕರ ವ್ಯವಸ್ಥೆ ಮಾಡಿಕೊಡಲಾಗುವುದೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಎನ್.ಜಿ ಬಸವರಾಜಪ್ಪ,ಎಫ್ಸಿ ಗೋದಾಮು ವ್ಯವಸ್ಥಾಪಕ ಎಂ ಗೋವಿಂದ ರೆಡ್ಡಿ,ಎಪಿಎಂಸಿ ಸದಸ್ಯ ಮಾಣಿಕ್ಯ ರೆಡ್ಡಿ,ಆಹಾರ ಇಲಾಖೆಯ ಶಿರಸ್ತೆದಾರ ಬಿ.ಮಹೇಶ್, ರೈತರಾದ ಗೋಪಾಲ, ಮಹೇಸಾ, ಕ್ರಿಷ್ಣ, ಬಸವರೆಡ್ಡಿ ಮಲ್ಲಿಕಾರ್ಜುನ, ರಮೇಶ, ಈರಣ್ಣ ಮತ್ತಿತರರು ಇದ್ದರು.
ಯು.ವೆಂಕಟೇಶ ಎಕ್ಸ್ ಪ್ರೆಸ್ ಟಿವಿ ಬಳ್ಳಾರಿ