ಹುಬ್ಬಳ್ಳಿ:ಸದ್ಯಕ್ಕೆ ಬಸ್ ದರ ಹೆಚ್ಚಳ ಮಾಡುವ ಪ್ರಸ್ತಾವನೆ ಸರಕಾರದ ಮುಂದಿಲ್ಲ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಸ್ಪಷ್ಟಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಸದ್ಯದ ಸ್ಥಿತಿಗೆ ಸಾರಿಗೆ ಟಿಕೆಟ್ ಹೆಚ್ಚಳ ಮಾಡುವುದು ಅನಿವಾರ್ಯ.ಆದರೆ ಈ ಕುರಿತು ಪ್ರಸ್ತಾವನೆ ಸದ್ಯಕ್ಕಿಲ್ಲ.ಅಲ್ಲದೆ, ಜನಸಾಮಾನ್ಯರಿಗೆ ಹೊರೆ ಮಾಡುವುದು ನಮಗೆ ಇಷ್ಟ ಇಲ್ಲ.ಜೊತೆಗೆ ಸಾರಿಗೆ ಸಂಸ್ಥೆಗೆ ಎಷ್ಟೇ ಸಂಕಷ್ಟ ಬಂದರೂ ಟಿಕೆಟ್ ದರದಲ್ಲಿ ಹೆಚ್ಚಳ ಇಲ್ಲ ಎಂದು ಹೇಳಿದರು.
ಇನ್ನು ವಾಯುವ್ಯ ಸಾರಿಗೆ ನಿಗಮಕ್ಕೆ ೪೧೪ ಕೋಟಿ ರೂ. ಹಾನಿಯಾಗಿದೆ. ಪ್ರಸ್ತುತ ಪ್ರತಿ ತಿಂಗಳು ೯೦ ಕೋಟಿ ರೂ. ನಷ್ಟದಲ್ಲಿ ನಮ್ಮ ಸಂಸ್ಥೆ ಇದೆ. ವೆಚ್ಚವನ್ನು ಕಡಿಮೆ ಮಾಡಿ,ಹಾನಿಯನ್ನು ಕಡಿಮೆ ಮಾಡಲು ೩ತಿಂಗಳ ನೀಲಿ ನಕ್ಷೆಯನ್ನು ನೀಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಟಿಕೆಟ್ ದರ ಹೆಚ್ಚಿಸದಿರುವುದೇ ನಷ್ಟಕ್ಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು.
ಇದಲ್ಲದೆ,ಕೊರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ೬೦ ದಿನಗಳ ಕಾಲ ಬಸ್ ಸಂಚಾರ ಸ್ಥಗಿತವಾಗಿತ್ತು.ಹೀಗಾಗಿ ಎಲ್ಲ ನಿಗಮಗಳಿಂದ ೧೮೦೦ ಕೋಟಿಗೂ ಅಧಿಕ ನಷ್ಟ ಉಂಟಾಗಿದೆ.ನಾಲ್ಕು ನಿಗಮದಿಂದ ೧.೩೦ ಲಕ್ಷ ಸಿಬ್ಬಂದಿ ಬಳಗ ಇದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ ನಂತರ ಅವರಿಗೆ ವೇತನ ಬಿಡುಗಡೆ ಮಾಡಿದೆ. ಮೇ ತಿಂಗಳ ವೇತನದಲ್ಲಿ ಅರ್ಧ ಸಂಬಳವನ್ನು ಸರ್ಕಾರ ನೀಡಲು ಮುಂದಾಗಿದೆ. ಇನ್ನೂ ಸ್ವಲ್ಪ ಹಣವನ್ನು ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ಅವರು,ಈಗಾಗಲೇ ಹಗಲು ಸಂಚಾರ ಆರಂಭಿಸಲಾಗಿದೆ.ಇನ್ನಷ್ಟು ದಿನ ಬಸ್ನಲ್ಲಿ ೩೦ ಜನರ ಪ್ರಯಾಣಕ್ಕೆ ಅವಕಾಶ ನೀಡಲಾಗುವುದು,ಇನ್ನು ಕೆಲವೇ ದಿನಗಳಲ್ಲಿ ರಾತ್ರಿ ವೇಳೆ ಬಸ್ ಸಂಚಾರ ಆರಂಭಿಸುವ ಕುರಿತು ಚಿಂತನೆ ನಡೆಯುತ್ತಿದೆ.ಹೀಗಾಗಿರಾತ್ರಿ ವೇಳೆ ಸಾರ್ವಜನಿಕರು ಪ್ರಯಾಣ ಬೆಳೆಸಬಹುದು.ಈ ಕುರಿತು ಶೀಘ್ರವೇ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದರು.
ಅಲ್ಲದೆ, ಸಾರಿಗೆ ಸಂಸ್ಥೆಯಲ್ಲಿನ ಭ್ರಷ್ಟಾಚಾರ ವಿಚಾರವಾಗಿ ಮಾತನಾಡಿದ ಅವರು, ಸಾರಿಗೆ ಸಂಸ್ಥೆಯಲ್ಲಿ ಸೋರಿಕೆ ತಡೆಗಟ್ಟಬೇಕು.ಸೋರಿಕೆ ತಡೆಗಟ್ಟಬೇಕು ಎಂದರೆ ಮೊದಲು ಭ್ರಷ್ಟಾಚಾರ ನಿಲ್ಲಬೇಕು.ಹೀಗಾಗಿ ನಾಲ್ಕು ನಿಗಮದಲ್ಲಿ ಸೋರಿಕೆ ತಡೆಯಲು ಭ್ರಷ್ಟಾಚಾರ ನಿಲ್ಲಿಸಬೇಕಿದೆ ಎಂದು ಮಾಹಿತಿ ನೀಡಿದರು.
ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ