ಮಳವಳ್ಳಿ(ಮಂಡ್ಯ):೨೦೦೩ರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತಂದು ಕೇಂದ್ರ ಸರ್ಕಾರ ವಿದ್ಯುತ್ ಉತ್ಪಾದನೆ ಮತ್ತು ವಿತರಣೆಯನ್ನು ಖಾಸಗೀಕರಣ ಮಾಡುವ ಹುನ್ನಾರ ಮಾಡುತ್ತಿದೆ ಎಂದು ಬಹುಜನ ಸಮಾಜ ಪಕ್ಷದ ರಾಜ್ಯ ಅಧ್ಯಕ್ಷರಾದ ಎಂ.ಕೃಷ್ಣಮೂರ್ತಿ ಆರೋಪಿಸಿದ್ದಾರೆ.
ಹಲಗೂರಿನ ಪಕ್ಷದ ಕಛೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು,೨೦೦೩ರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ವಿದ್ಯುತ್ ಉತ್ಪಾದನಾ ಮತ್ತು ವಿತರಣಾ ಕ್ಷೇತ್ರವನ್ನು ಖಾಸಗಿಯವರಿಗೆ ವಹಿಸಲು ಹುನ್ನಾರ ನಡೆದಿದೆ.ಅದರಲ್ಲೂ ಮುಖ್ಯವಾಗಿ ಪ್ರಧಾನ ಮಂತ್ರಿ ಮೋದಿಯವರ ಆಪ್ತರಾಗಿರುವ ಗೌತಮ್ ಅಧಾನಿಯವರ ಕಂಪನಿಗೆ ಅನುಕೂಲ ಮಾಡಿಕೊಡುವ ಉದ್ದೇದಿಂದ ಈ ತಿದ್ದುಪಡಿ ತರಲಾಗಿದೆ ಎಂಬ ವ್ಯಾಪಕ ಚರ್ಚೆ ನಡೆಯುತ್ತಿದ್ದು,ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ಲಕ್ಷಾಂತರ ಜನ ನೌಕರರ ಉದ್ಯೋಗ ಭದ್ರತೆಗೆ ಕುತ್ತು ತರುವಂತಹ ಕೆಲಸವನ್ನು ಕೇಂದ್ರ ಸರ್ಕಾರವು ಮಾಡ ಹೊರಟಿದೆ ಎಂದು ಕಿಡಿಕಾರಿದರು.
ಇನ್ನು ಬಡವರಿಗೆ ಉಚಿತವಾಗಿ ನೀಡಲಾಗುತ್ತಿರುವ ಭಾಗ್ಯ ಜ್ಯೋತಿ ಯೋಜನೆ,ರೈತರ ಕೃಷಿ ಚಟುವಟಿಕೆಗಳಿಗೆ ಉಚಿತವಾಗಿ ನೀಡಲಾಗುವ ಹಾಗೂ ಉದ್ಯಮ ಕ್ಷೇತ್ರದಲ್ಲಿ ರಿಯಾಯಿತಿ ದರದಲ್ಲಿ ನೀಡಲಾಗುತ್ತಿರುವ ವಿದ್ಯುತ್ ಸೌಲಭ್ಯಕ್ಕೂ ಇದರಿಂದ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದರು.
ಸದ್ಯ ಈ ಕಾಯ್ದೆಗೆ ಅಖಿಲ ಭಾರತ ವಿದ್ಯುತ್ ಇಂಜಿನಿಯರ್ ಸಂಘಟನೆ ವಿರೋಧ ವ್ಯಕ್ತಪಡಿಸಿದೆ.ಜೊತೆಗೆ ಜೂ.೧ ರಂದು ದೇಶ ವ್ಯಾಪಿ ಚಳುವಳಿಯನ್ನು ಮಾಡಲಾಗುವುದು ಎಂದು ಕರೆ ನೀಡಿದ್ದು ಈ ಹೋರಾಟಕ್ಕೆ ಬಹುಜನ ಸಮಾಜ ಪಕ್ಷ ಬೆಂಬಲ ನೀಡುತ್ತದೆ ಎಂದು ಹೇಳಿದರು.
ವಿದ್ಯುತ್ ಕ್ಷೇತ್ರದಲ್ಲಿ ದುಡಿಯುತ್ತಿರುವ ನೌಕರ ಸಿಬ್ಬಂದಿಗಳು,ಉಚಿತ ವಿದ್ಯುತ್ನ ಫಲಾನುಭವಿಗಳಾದ ಬಡವರು ಮತ್ತು ರೈತರು ಹಾಗೂ ರಿಯಾಯಿತಿ ಪಡೆಯುತ್ತಿರುವ ಉದ್ಯಮಪತಿಗಳು ಕೂಡ ಈ ತಿದ್ದುಪಡಿ ಕಾಯ್ದೆ ವಿರುದ್ಧದ ಧನಿ ಎತ್ತಬೇಕು ಎಂದು ಕರೆ ನೀಡಿದರು.
ಕೇಂದ್ರ ಸರ್ಕಾರದ ಖಾಸಗೀಕರಣ ನೀತಿಯ ಹಿಂದೆ ಇರುವಂತಹ ಹುನ್ನಾರ ಬಯಲಿಗೆ ಎಳೆಯಬೇಕಿದೆ.ಅಲ್ಲದೆ,ಸಾರ್ವಜನಿಕ ವಲಯದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಬೇಕು.ಇದರ ವಿರುದ್ಧ ಪಕ್ಷತೀತವಾಗಿ ಹೊರಟ ಮಾಡಬೇಕು ಎಂದು ಬಹುಜನ ಸಮಾಜ ಪಕ್ಷ ಕರೆ ನೀಡುತ್ತೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಉಸ್ತುವಾರಿ ಹ.ನಾ ವೀರಭದ್ರಯ್ಯ ,ಖಜಾಂಚಿ ರಾಜೇಂದ್ರ ಬಿ.ಡಿ, ಹಲಗೂರು ಹೋಬಳಿ ಘಟಕದ ಅಧ್ಯಕ್ಷ ಉಮೇಶ್. ಎಸ್.ಮೌರ್ಯ, ಮುಖಂಡರಾದ ಆನಂದ್ ಕುಮಾರ್, ಶಿವಮೂರ್ತಿ, ಆನಂದ್,ಸಿದ್ದಲಿAಗ ಮೂರ್ತಿ, ಶಿವಕುಮಾರ್, ಪುಟ್ಟ,ವೆಂಕಟೇಶ್ ಮತ್ತಿತರರು ಇದ್ದರು.
ಎ.ಎನ್.ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ(ಮಂಡ್ಯ)