ಹುಬ್ಬಳ್ಳಿ: ಭಾರತ ದೇಶದಲ್ಲಿ ಪಾರದರ್ಶಕ ಆಡಳಿತದ ಜೊತೆಗೆ ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ಮುನ್ನೆಡೆಸಿದ ಕೀರ್ತಿ ಭಾರತಿಯ ಜನತಾ ಪಕ್ಷದ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದು ಬೃಹತ್ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿಂದು ಪ್ರವಾಸಿ ಮಂದಿರದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು,ನರೇಂದ್ರ ಮೋದಿ ೨ ಬಾರಿ ಪ್ರಧಾನ ಮಂತ್ರಿಯಾಗುವ ಮೂಲಕ ದೇಶದಲ್ಲಿ ಹೊಸ ಹೊಸ ಯೋಜನೆ ಜಾರಿಮಾಡಿ ಜಗತ್ತನ್ನೇ ತನ್ನತ್ತ ನೋಡುವಂತೆ ಮಾಡಿದ್ದಾರೆ.ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನೀಡುವುದರೊಂದಿಗೆ ಒಂದೇ ದೇಶ ಒಂದೇ ತೆರಿಗೆ ಹಾಗೂ ಒಂದೇ ರೇಷನ್ ಕಾರ್ಡ್ ಯೋಜನೆಯ ಮೂಲಕ ಹತ್ತು ಹಲವಾರು ಜನಹಿತ ಕಾರ್ಯಕ್ರಮಗಳನ್ನು ಮಾಡಿದ್ದಾರೆ ಎಂದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತ್ರಿವಳಿ ತಲಾಖ್,ಸಂವಿಧಾನ ೩೭೦,ಪೌರತ್ವ ಕಾಯ್ದೆ ತಿದ್ದುಪಡಿ, ರಾಮಮಂದಿರದ ನಿರ್ಮಾಣದ ಕನಸು,ಭಯೋತ್ಪಾದನಾ ವಿರುದ್ಧದ ಹೋರಾಟದ ಮೂಲಕ ದೇಶವನ್ನು ಸುವ್ಯವಸ್ಥಿತ ರೀತಿಯಲ್ಲಿ ಮುನ್ನೆಡಿಸಿದ ಗೌರವ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲುತ್ತದೆ ಎಂದು ಹೇಳಿದರು.
ಅಲ್ಲದೆ,ಕೊರೊನಾ ವೈರಸ್ ಸಂದಿಗ್ಧ ಪರಿಸ್ಥಿತಿಯಲ್ಲಿ ಕೂಡ ೧೩೦ಕೋಟಿ ಜನರಿಗೆ ರಕ್ಷಣಾತ್ಮಕ ನಿರ್ಧಾರವನ್ನು ಕೈಗೊಂಡು ವೈರಸ್ ನಿಯಂತ್ರಣದ ಮೂಲಕ ಜಗತ್ತಿಗೆಯೇ ಮಾರ್ಗದರ್ಶಕರಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ವೇಳೆ ಯಡಿಯೂರಪ್ಪ ನಂತರ ನೀವೇ ಸಿಎಂ ಆಗಲಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ನನ್ನನ್ನ ಸಿಎಂ ಮಾಡ್ತೀನಿ ಅಂತ ಯಾರೂ ಹೇಳಿಲ್ಲ.ನೀವೇ ನನಗೆ ಹೇಳಿದ್ದು ಎಂದು ಹೇಳಿದರು.
ನಂಗ್ಯಾರೂ ಫೋನ್ ಮಾಡಿ ಚರ್ಚೆ ಮಾಡಿಲ್ಲ.ನಮ್ಮದು ಶಿಸ್ತಿನ ಪಕ್ಷ, ಶಾಸಕರು ಈ ರೀತಿ ಸಭೆ ಮಾಡೋದು ಸರಿಯಲ್ಲ.ಪಕ್ಷದವೇದಿಕೆಯಲ್ಲಿ ಎಲ್ಲವೂ ಸರಿಪಡಿಸಿಕೊಳ್ಳಬೇಕು.ನಮ್ಮ ಪಕ್ಷದ ನಾಯಕರು ಅದನ್ನ ಬಗೆಹರಿಸುತ್ತಾರೆ ಎಂದರು.
ಇದಲ್ಲದೆ,ನಮಸ್ತೆ ಟ್ರಂಪ್ ಕಾರ್ಯಕ್ರದಿಂದ ಕೊರೊನಾ ಅತೀ ಹೆಚ್ಚು ಹರಡಿದೆ ಎನ್ನುವ ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರು ಟೀಕೆ ಮಾಡ್ಲೇಬೇಕು ಅಂತಾ ಮಾಡುತ್ತಿದ್ದಾರೆ.ಇಷ್ಟು ದಿನ ಯಾಕೆ ಅದರ ಬಗ್ಗೆ ಮಾತನಾಡಿಲ್ಲ. ಇವಾಗ ಏನಾದ್ರು ಟೀಕೆ ಮಾಡಬೇಕು ಅಂತಾ ಅವರು ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.
ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ