ರಾಯಚೂರು: ನಿನ್ನೆ ಸಂಜೆ ಸುರಿದ ಮಳೆಗೆ ಚರಂಡಿ ಬ್ಲಾಕ್ ಆಗಿ ಚರಂಡಿಯಲ್ಲಿ ನೀರು ತುಂಬಿ, ನೀರು ರಸ್ತೆಗೆ ಹರಿದು ಬಂದು ರಸ್ತೆ ಕೆಸರು ಗದ್ದೆಯಾದ ಘಟನೆ ತಲೇಖಾನ್ ಗ್ರಾಮದಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ತಲೇಖಾನ್ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕಳೆದ ಎರಡು ವರ್ಷಗಳಿಂದ ಚರಂಡಿಯನ್ನು ಸ್ವಚ್ಚ ಗೊಳಿಸುವಲ್ಲಿ ವಿಫಲರಾಗಿದ್ದಾರೆ.ಅಷ್ಟೇ ಅಲ್ಲದೇ ಗ್ರಾಮದ ಈರಪ್ಪ ಕುರುಬರ್ ಎಂಬವವರ ಮನೆಗೆ ಚರಂಡಿ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.ಇನ್ನು ಕೆಸರು ತುಂಬಿದ ರಸ್ತೆಯಲ್ಲೇ ಚಿಕ್ಕ ಚಿಕ್ಕ ಮಕ್ಕಳು,ವಯೋವೃದ್ದರು ಓಡಾಡುತ್ತಿದ್ದಾರೆ.ಈ ಬಗ್ಗೆ ಗ್ರಾಮದ ಜನರು ಅನೇಕ ಬಾರಿ ಗ್ರಾ.ಪಂ.ಅಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲಾ ಎಂದು ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಧಿಕಾರಿಗಳು ಈಗಲಾದ್ರು ಎಚ್ಚೆತ್ತುಕೊಂಡು ಬ್ಲಾಕ್ ಆಗಿರುವ ಚರಂಡಿಯನ್ನು ಸ್ವಚ್ಚಗೊಳಿಸುತ್ತಾರೊ ಅಥವಾ ಜಾಣ ಕುರುಡುತನ ಪ್ರದರ್ಶಿಸುತ್ತಾರೊ ಕಾದು ನೋಡಬೇಕಿದೆ.