ಮಂಡ್ಯ: ಮಳವಳ್ಳಿ ತಾಲೂಕಿನ ಹಿಟ್ಟನಹಳ್ಳಿ ಕೊಪ್ಪಲು ಮತ್ತು ಮಿಕ್ಕೆರೆ ಗ್ರಾಮ ಪಂಚಾಯತ್ ಪಿ ಡಿ ಒ ಕೇಶವ ಮೂರ್ತಿ ತಮ್ಮ ಅಧಿಕಾರದ ಅವಧಿಯಲ್ಲಿ ಹಣ ದುರುಪಯೋಗ ಹಾಗೂ ಕರ್ತವ್ಯ ಲೋಪವೆಸಗಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಉಪಾಧ್ಯಕ್ಷ ಎಂ ಎಸ್ ಚಿದಂಬರ್ ಆರೋಪಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಟ್ಟನಹಳ್ಳಿ ಕೊಪ್ಪಲು ಗ್ರಾಮ ಪಂಚಾಯತ್ ನಲ್ಲಿ 14ನೇ ಹಣಕಾಸು ಯೋಜನೆಯಲ್ಲಿ 10 ರಿಂದ 15 ಲಕ್ಷ ರೂ ಅವ್ಯವಹಾರ ನಡೆಸಿರುವುದು ಕಂಡು ಬಂದಿದೆ ಎಂದು ದೂರಿದರು. ಕರ ವಸೂಲಿಗಾರ ಎಚ್. ಎಂ ಅಶೋಕ್ ಅನಧಿಕೃತ ಗೈರು ಹಾಜರಾಗಿದ್ದರೂ, ಅವರನ್ನು ಪಂಚಾಯತ್ ನೀತಿ ಸಂಹಿತೆ ಇದ್ದರೂ, ವಿವರವನ್ನು ಪಂಚ ತಂತ್ರಾಂಶಕ್ಕೆ ಅಳವಡಿಸಿ ಅಧಿಕಾರ ದುರುಪಯೋಗ ಪಡಿಸಿಕೊಂಡು 1,13,967 ರೂ ವೇತನ ಪಾವತಿಸಿದ್ದಾರೆ.ಮಿಕ್ಕೆರೆ ಗ್ರಾಮ ಪಂಚಾಯತ್ ನಲ್ಲಿ ಕಾರ್ಯ ನಿರ್ವಹಿಸುವಾಗ ಅಲ್ಲಿಯೂ ಹಣ ದುರುಪಯೋಗ ಪಡಿಸಿಕೊಂಡಿದ್ದಾರೆ, ಇದುವರೆಗೂ ಸಂಬಂಧಪಟ್ಟಂತಹ ಅಧಿಕಾರಿಗಳು ಯಾವುದೇ ತನಿಖೆ ಮಾಡದೇ ವಿಳಂಬ ಮಾಡುತ್ತಿದ್ದಾರೆ, ಕರ್ತವ್ಯ ಲೋಪ ಮತ್ತು ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಈತನ ಮೇಲೆ ಲೆಕ್ಕಪರಿಶೋಧನೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಇನ್ನು ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಕೆ ಟಿ. ಶಂಕರೇಗೌಡ, ಮಂಡ್ಯತಾಲ್ಲೂಕು ಅಧ್ಯಕ್ಷ ಅಶೋಕ್, ಮಳವಳ್ಳಿ ತಾಲ್ಲೂಕು ಅಧ್ಯಕ್ಷ ಅಪ್ಪೇಗೌಡ, ಪಟ್ಟಣ ಅಧ್ಯಕ್ಷ ಗುರುಪ್ರಸಾದ್, ಹಲಗೂರು ಘಟಕದ ಅಧ್ಯಕ್ಷ ಹೂವಿನ ಕುಮಾರ್ ಸೇರಿದಂತೆ ಇತರರು ಹಾಜರಿದ್ದರು.