ಶಹಾಪುರ : ಸಗರ ನಾಡಿನ ಸಾಂಸ್ಕೃತಿಕ ಲೋಕದ ರಾಯಭಾರಿ, ರಾಜ್ಯ ಮಟ್ಟದ ಕ್ರೀಡಾಪಟು, ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ರಾಜಾ ಮದನಗೋಪಾಲ ನಾಯಕ್ ಅವರ ಅಕಾಲಿಕ ನಿಧನದಿಂದ ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶಹಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಲಿಂಗಣ್ಣ ಆನೇಗುಂದಿ ಹೇಳಿದರು. ಸಹೃದಯಿ ಧೀಮಂತ ನಾಯಕನನ್ನು ಕಳೆದುಕೊಂಡ ಇಂದು ಸಗರನಾಡಿಗೆ ಬರ ಸಿಡಿಲು ಬಡಿದಂತಾಗಿದೆ. ಉತ್ತಮ ಸ್ನೇಹ ಜೀವಿಯಾಗಿರುವ ರಾಜಾ ಮದನಗೋಪಾಲ ನಾಯಕ ಅವರು ಯಾವಾಗಲೂ ಲವಲವಿಕೆಯಿಂದ ಎಲ್ಲರೊಂದಿಗೆ ಆತ್ಮೀಯತೆಯಿಂದ, ಪ್ರೀತಿಯಿಂದ ಮಾತನಾಡಿಸುತ್ತಿದ್ದರು, ಇಂದಿನ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದರು ಅಂತಹ ವ್ಯಕ್ತಿ ನಮ್ಮನ್ನೆಲ್ಲಾ ಅಗಲಿರುವುದು ತುಂಬಲಾರದ ನಷ್ಟ ಎಂದು ರಾಜಾ ಮದನಗೋಪಾಲ ನಾಯಕ್ ರವರನ್ನು ನೆನೆದು ಭಾವುಕರಾದರು. ಇನ್ನು ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಸಿದ್ದರಾಮ ಹೊನಕಲ್, ಡಾ.ಮೊನಪ್ಪ ಶಿರವಾಳ,ವಿಶ್ವಾರಾಧ್ಯ ಸತ್ಯಂಪೇಟೆ,ಶಿವಣ್ಣ ಇಜೇರಿ, ಗೌರವ ಕಾರ್ಯದರ್ಶಿಗಳಾದ ಪಂಚಾಕ್ಷ ರಯ್ಯ ಹಿರೇಮಠ, ಬಸವರಾಜ ಸಿನ್ನೂರ್, ಲಿಂಗಣ್ಣ ಪಡಶೆಟ್ಟಿ, ಮಹಿಳಾ ಪ್ರತಿನಿಧಿಗಳಾದ ರೇಣುಕಾ ಚಟ್ರಕಿ, ಹಣಮಂತಿ ಗುತ್ತೇದಾರ, ಭಾಗ್ಯ ದೊರೆ, ಲಕ್ಷ್ಮಿ ಪಟ್ಟಣಶೆಟ್ಟಿ ಹಾಗೂ ಇತರರು ಸಂತಾಪ ಸೂಚಿಸಿದ್ದಾರೆ.
ವರದಿ- ಬಸವರಾಜ ಸಿನ್ನೂರ ಎಕ್ಸ್ ಪ್ರೆಸ್ ಟಿವಿ