ಹುಬ್ಬಳ್ಳಿ: ರಾಖಿ ಹಬ್ಬ ಇನ್ನೇನು ಸನಿಹವಿದೆ. ರಾಖಿ ಹಬ್ಬ ಬಂದರೆ ಸಾಕು ಅಣ್ಣ ತಂಗಿಯರಿಗೆ ಇನ್ನಿಲ್ಲದ ಸಡಗರ, ತಂಗಿ ಆದವಳು ಅಣ್ಣನಿಗೆ ಈ ವರ್ಷ ಹೊಸ ರಾಕಿ ಕಟ್ಟಬೇಕು ಅವನಿಗೆ ಹರಸಬೇಕೆಂದು ಆಸೆ ಇರುವುದು ಸಹಜ. ಅದರಂತೆ ಅಣ್ಣ ಕೂಡಾ ತಂಗಿಗೆ ಏನಾದರೂ ವಿಶೇಷ ಕೊಡುಗೆ ಕೊಡಬೇಕೆಂದು ಅಂದುಕೊಳ್ಳುವುದು ಸರ್ವೆ ಸಾಮಾನ್ಯ. ಇವೆಲ್ಲದಕ್ಕೂ ಕೊರೋನಾ ಬ್ರೇಕ್ ಹಾಕಿದ್ದು, ಜನರು ಮನೆಯಿಂದ ಹೊರಬರಲು ಭಯಬೀತರಾಗಿದ್ದಾರೆ. ಪ್ರತಿವರ್ಷ ಈ ಸಮಯದಲ್ಲಿ ಮಾರುಕಟ್ಟೆಗಳೇಲ್ಲಾ ಜನರಿಂದ ಗಿಜಗಿಡುತ್ತಿದ್ದವು. ಆದರೆ ಇದೀಗ ಕರೋನಾದ ಕರಿಛಾಯೆ ಆವರಿಸಿದ್ದು ಲಕ್ಷಾಂತರ ರೂಪಾಯಿ ಬಂಡವಾಳ ಹೂಡಿ ರಾಕಿ ತಂದರು ಗ್ರಾಹಕರಿಲ್ಲದೇ ಅಂಗಡಿಗಳು ಬಿಕೋ ಎನ್ನುತ್ತಿವೆ. ಇದೀಗ ಜಿಲ್ಲೆಯಲ್ಲಿ ಲಾಕ್ ಡೌನ್ ತೆರವು ಗೊಳಿಸಲಾಗಿದ್ದು, ಎಲ್ಲ ಮಾರುಕಟ್ಟೆಯಲ್ಲಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಅದರಂತೆ ಅಂಗಡಿಗಳಲ್ಲಿ ಮಾಸ್ಕ್, ಸ್ಯಾನಿಟೇಜರ್ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ವ್ಯಾಪಾರ ಮಾಡುವುದು ಕಡ್ಡಾಯವಾಗಿದೆ. ಸೀಜನ್ ತಕ್ಕಂತೆ ನಮ್ಮ ವ್ಯಾಪಾರಗಳು ನಡೆಯುತ್ತವೆ. ಹೀಗಾಗಿ ಯಾವುದೇ ಭಯವಿಲ್ಲದೆ ಜನರು ರಾಖಿ ಖರೀದಿ ಮಾಡಿ ಹಬ್ಬವನ್ನು ಆಚರಿಸಬಹುದು ಎಂದು ರಾಖಿ ಅಂಗಡಿ ಮಾಲೀಕರು ತಿಳಿ ಹೇಳುತ್ತಿದ್ರು ಸಹ ಗ್ರಾಹಕರು ಮಾತ್ರ ಅಂಗಡಿಯತ್ತ ಸುಳಿಯದೇ ಇರುವುದು ಮಾಲೀಕರಲ್ಲಿ ಆತಂಕ ಸೃಷ್ಟಿಸಿದೆ. ಇನ್ನೂಅಣ್ಣ ತಂಗಿಯರ ಹಬ್ಬವಾದ ರಾಖಿ ಹಬ್ಬಕ್ಕೆ ಕೊರೋನಾ ಈ ಬಾರಿ ಅಡ್ಡಿ ಮಾಡಿದ್ದು, ಆದಷ್ಟು ಜನರು ಆರೋಗ್ಯದ ದೃಷ್ಟಿಯಿಂದ ಕೊರೋನಾ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಸಂಪ್ರದಾಯದಂತೆ ಹಬ್ಬ ಆಚರಣೆ ಮಾಡುವುದು ಸೂಕ್ತವಾಗಿದೆ.