ನಾಗಮಂಗಲ: ಅಕ್ರಮ ಸಾಗುವಳಿ ರೈತರಿಗೆ ಸಕ್ರಮ ಮಾಡಿಕೊಳ್ಳಲು ಜಾರಿಯಾಗಿರುವ ಬಗರ್ ಹುಕ್ಕಂ ಯೋಜನೆಯ ನಿಯಮದಂತೆ, ಮಂಜೂರಾಗಿರುವ ಭೂಮಿ ಒಂದಾದರೆ ಅಳತೆ ಮಾಡುವ ಮೂಲಕ ಸ್ವ ಅನುಭವದ ಆಧಾರದ ಮೇಲೆ ಗುರುತಿಸಲು ಹೊರಟಿರುವ ಭೂಮಿ ಮತ್ತೊಂದು ಕಡೆ, ಇಂತಹ ಒಂದು ತಾಲ್ಲೂಕು ಆಡಳಿತದ ಯಡವಟ್ಟಿಗೆ ಘೆರಾವ್ ಹಾಕುವ ಮೂಲಕ ನಿಯಮ ಬಾಹಿರ ಭೂಮಿ ಅಳತೆಗೆ ಅಡ್ಡಿ ಪಡಿಸಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಅಂಚೆಚಿಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸರ್ವೆ ನಂಬರ್ 125/p1 ರಲ್ಲಿ ಮಂಜೂರಾಗಿರುವ ಗೋಮಾಳದ ಭೂಮಿಯನ್ನು ಸರ್ವೆ ನಂಬರ್ 186ರ ಗೋಮಾಳದ ಜಮೀನಿನಲ್ಲಿ ಅಳತೆ ಮಾಡಲು ಮುಂದಾಗುತ್ತಿದ್ದಂತೆ ಗ್ರಾಮಸ್ಥರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳೀಯ ರೈತರನ್ನು ಕಡೆಗಣಿಸಿ ಬೆಂಗಳೂರಿನ ವಾಸಿಗಳಿಗೆ ಮನ್ನಣೆ ನೀಡಿರುವ ತಾಲ್ಲೂಕು ಆಡಳಿತದ ವಿರುದ್ದ ಸ್ಥಳೀಯ ರೈತರು ಆಕ್ರೋಶ ವ್ಯಕ್ತಪಡಿಸಿದ್ದು, ನೂರಾರು ವರ್ಷಗಳಿಂದ ಸಾಗುವಳಿ ಮಾಡುವ ಮೂಲಕ ಜೀವನ ನಡೆಸುತ್ತಿರುವ ನಮ್ಮನ್ನು ಬೀದಿಗೆ ತಳ್ಳುವ ಮೂಲಕ, ಸಾಗುವಳಿ ನೆಪದಲ್ಲಿ ಉದ್ಯಮಿಗಳಿಗೆ ಮಣೆ ಹಾಕಲಾಗುತ್ತಿದೆ. ಇದೇ ಜಾಗದಲ್ಲಿ ಜಾನುವಾರುಗಳನ್ನು ಮೇಯಿಸಲಾಗುತ್ತಿದೆ. ಸ್ಥಳೀಯ ಸಾರ್ವಜನಿಕರ ಹಿತಾಸಕ್ತಿಯನ್ನು ಬಲಿಕೊಟ್ಟು ಬಗರ್ ಹುಕ್ಕಂ ನಿಯಮಗಳನ್ನು ಗಾಳಿಗೆ ತೂರುವ ಮೂಲಕ ಉದ್ಯಮಿಗಳಿಗೆ ಅವಕಾಶ ನೀಡಬೇಡಿ ಎಂದು ಅಳತೆಗಾಗಿ ಬಂದಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.