ನಾಗಮಂಗಲ: ಒಂದೇ ಕುಟುಂಬದ ಮೂವರು ಜಲಸಮಾಧಿಯಾದ ಘಟನೆಗೆ ಮುಖ್ಯಮಂತ್ರಿಗಳ ಪರಿಹಾರನಿಧಿಯಿಂದ ರಾಜ್ಯ ಸರ್ಕಾರ ಘೋಷಣೆ ಮಾಡಿದ್ದು 15 ಲಕ್ಷ ರೂಪಾಯಿ, ಆದರೆ ಕೊಟ್ಟಿದ್ದು ಮಾತ್ರ ಕೇವಲ 5 ಲಕ್ಷ ರೂಪಾಯಿಯಂತೆ,ಈ ಘಟನೆಗೆ ನಡೆದಿರುವುದು ಮುಖ್ಯಮಂತ್ರಿಗಳ ತವರು ಜಿಲ್ಲೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಹೊಣಕೆರೆ ಹೋಬಳಿಯ ಬೀರನಹಳ್ಳಿಯಲ್ಲಿ.
ಕಳೆದೆರಡು ತಿಂಗಳ ಹಿಂದೆ ಜೂ.14 ರಂದು ಬೀರನಹಳ್ಳಿ ಗ್ರಾಮದ ನರಸಿಂಹಯ್ಯ ಎಂಬುವರ ಪತ್ನಿ ಗೀತಾ ಹಾಗೂ ಮಕ್ಕಳಾದ ಸವಿತಾ ಮತ್ತು ಸೌಮ್ಯ ಎಂಬ ಮೂವರು ಆಕಸ್ಮಿಕ ಕಾಲು ಜಾರಿ ಜಲಸಮಾಧಿಯಾಗಿದ್ದರು. ಈ ವಿಷಯ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಜೂ.15 ರಂದು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಿ.ಎಂ.ಯಡಿಯೂರಪ್ಪ ತಲಾ ರೂ.05 ಲಕ್ಷದಂತೆ 15 ಲಕ್ಷ ರೂ.ಗಳನ್ನು ಘೋಷಣೆ ಮಾಡುವ ಮೂಲಕ ಆದೇಶ ಹೊರಡಿಸಿದ್ದರು. ಈ ಸಂಬಂಧ ಜೂ.16 ರಂದು ಮಂಡ್ಯ ಜಿಲ್ಲಾಧಿಕಾರಿಗಳು ಹಾಗೂ ತಾಲ್ಲೂಕು ದಂಡಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡುವ ಮೂಲಕ ನೊಂದ ಕುಟುಂಬಕ್ಕೆ ಸಾಂತ್ವಾನ ಹೇಳಿ ರಾಜ್ಯ ಸರ್ಕಾರದ ಪರಿಹಾರ ಧನಸಹಾಯದ ವಿಷಯವನ್ನು ತಿಳಿಸಿದ್ದರು. ಆದರೆ ತಹಸೀಲ್ದಾರ್ ಕಚೇರಿಯ ದೂರವಾಣಿ ಕರೆಯಂತೆ ತಾಲೂಕು ದಂಡಾಧಿಕಾರಿಗಳಿಂದ ಕೇವಲ 05 ಲಕ್ಷ ರೂ.ಗಳ ಚೆಕ್ ಸ್ವೀಕರಿಸಿದ ನರಸಿಂಹಯ್ಯ ತಬ್ಬಿಬ್ಬಾಗಿದ್ದಾರೆ. ವಿಷಯ ತಿಳಿದು ಪಟ್ಟಣದ ಮಿನಿವಿಧಾನಸೌಧದ ಆವರಣಕ್ಕೆ ಆಗಮಿಸಿದ ಸ್ಥಳೀಯ ನಾಗರೀಕರು ಮತ್ತು ಮುಖಂಡರು ರಾಜ್ಯ ಸರ್ಕಾರದ ವಿರುದ್ದ, ನೊಂದ ಕುಟುಂಬಕ್ಕೆ ನೀಡಿರುವ ಮಾತಿನಂತೆ ಮುಖ್ಯಮಂತ್ರಿಗಳು ತಲಾ ರೂ.05 ಲಕ್ಷದಂತೆ 15 ಲಕ್ಷ ರೂಗಳ ಪೈಕಿ ಉಳಿಕೆ 10 ಲಕ್ಷ ರೂಗಳನ್ನು ಪರಿಹಾರವಾಗಿ ನೀಡಬೇಕು. ಇಲ್ಲವಾದಲ್ಲಿ ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿ ಮತ್ತು ಮುಖ್ಯಮಂತ್ರಿಗಳ ಕಚೇರಿಯ ಮುಂದೆ ನೊಂದ ಕುಟುಂಬದೊಂದಿಗೆ ಧರಣಿ ನಡೆಸುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.ನೊಂದ ನರಸಿಂಹಯ್ಯ ಮಾತನಾಡಿ, ಹೆಂಡತಿ ಮಕ್ಕಳನ್ನು ಕಳೆದುಕೊಂಡಿದ್ದ ನನ್ನ ಮನೆಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳ ಮತ್ತು ತಹಸೀಲ್ದಾರ್ ರವರ ಸಾಂತ್ವಾನದ ಮಾತಿನೊಂದಿಗೆ ರಾಜ್ಯ ಸರ್ಕಾರ ಘೋಷಿಸಿರುವ 15 ಲಕ್ಷದ ವಿಷಯ ಕೇಳಿ ಸಮಾದಾನವಾಗಿತ್ತು. ಉಳಿದಿಬ್ಬರು ಮಕ್ಕಳ ಭವಿಷ್ಯದ ಕನಸು ಕಂಡಿದ್ದ ನನಗೆ 05 ಲಕ್ಷ ರೂ.ಗಳ ಚೆಕ್ ನೋಡಿ ಬೇಸರವಾಗಿದೆ. ದಯವಿಟ್ಟು ಮುಖ್ಯಮಂತ್ರಿಗಳು ನೀಡಿರುವ ಆದೇಶದಂತೆ ಉಳಿದ 10 ಲಕ್ಷ ರೂ.ಗಳ ಪರಿಹಾರ ನೀಡುವ ಮೂಲಕ ನನ್ನ ಕುಟುಂಬದ ಆಸರೆಯಾಗಲಿ ಎಂಬುದು ನನ್ನ ಮನವಿ ಎಂದರು. ಈ ಸಂದರ್ಭ ಎಪಿಎಂಸಿ ಮಾಜಿ ಅಧ್ಯಕ್ಷ ಚೆನ್ನಪ್ಪ, ಮುಖಂಡರಾದ ಕಲ್ಲೇನಹಳ್ಳಿ ದಿನೇಶ್ ಹಾಗೂ ನೆರಲಕೆರೆ ರಾಮು ಸೇರಿದಂತೆ ಮತ್ತಿತರರು ಇದ್ದರು. ಇನ್ನೂ ನಾಳೆ ಜಿಲ್ಲೆಯ ಜೀವನಾಡಿ ಕೆಆರ್ಎಸ್ಗೆ ಭಾಗೀನ ಅರ್ಪಿಸಲು ಆಗಮಿಸುತ್ತಿರುವ ಮುಖ್ಯಮಂತ್ರಿಗಳು ಈ ವಿಷಯದ ಬಗ್ಗೆ ಎಚ್ಚೆತ್ತು, ಕೂಡಲೇ ಕೊಟ್ಟ ಮಾತಿನಂತೆ ಉಳಿಕೆ 10 ಲಕ್ಷ ರೂ.ಗಳನ್ನು ಬಿಡುಗಡೆ ಮಾಡುವ ಮೂಲಕ ನೊಂದ ಕುಟುಂಬದ ಆಸರೆಯಾಗಲಿ ಎಂಬುದು ನಮ್ಮ ಆಶಯ…
ವರದಿ- ಎಸ್.ವೆಂಕಟೇಶ್.
ಎಕ್ಸ್ ಪ್ರೆಸ್ ಟಿವಿ
ನಾಗಮಂಗಲ.