ಹಾವೇರಿ: ಕೃಷಿ ಸಚಿವ ಹಾಗೂ ಕೊಪ್ಪಳ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್ ರವರು ಇಂದು ಸೊರಬ ತಾಲೂಕಿನ ಯಲವಾಳ ಗ್ರಾಮ ಮತ್ತು ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ ಚಿಕ್ಕಕೊಣತಿ ಗ್ರಾಮದ ಜಮೀನುಗಳಲ್ಲಿ 2020-21ನೇ ಸಾಲಿನ ರೈತ ಬೆಳೆ ಸಮೀಕ್ಷೆ ಆ್ಯಪ್ ಪ್ರಾತ್ಯಕ್ಷಿಕೆ ನಡೆಸಿದರು. ಜಮೀನಿನಲ್ಲಿ ನಿಂತು ಬೆಳೆವಿವರ ಸರ್ವೆ ನಂಬರ್ ಸೇರಿದಂತೆ ಜಮೀನಿನಲ್ಲಿನ ತಮ್ಮ ಭಾವಚಿತ್ರವನ್ನು ಆ್ಯಪ್ ಪ್ರಾತ್ಯಕ್ಷಿಕೆ ಮಾಡಿ ರೈತರಿಗೆ ಮಾದರಿಯಾದರು. ಈ ಸಂದರ್ಭದಲ್ಲಿ ಮಾತನಾಡಿದ ಬಿ.ಸಿ.ಪಾಟೀಲ್ ರವರು ರೈತನ ಬೆಳೆ ರೈತನ ಹಕ್ಕಾಗಿದೆ. ಇದೇ ದೇಶದಲ್ಲಿ ಮೊದಲ ಬಾರಿಗೆ ರೈತನೇ ಸ್ವತಃ ತನ್ನ ಹೊಲದ ಸಮೀಕ್ಷೆ ನಡೆಸಿ ತಾನೇ ಪ್ರಮಾಣ ಪತ್ರ ನೀಡುವಂತಹ ಮಹತ್ವದ ಆ್ಯಪ್ ಇದಾಗಿದ್ದು, ರೈತರು ಆ್ಯಪ್ ಸಮೀಕ್ಷೆ ಬಗ್ಗೆ ಹೆಚ್ಚೆಚ್ಚು ಒಲವು ತೋರುತ್ತಿದ್ದಾರೆ. ಈ ಬಾರಿಯ ರೈತ ಬೆಳೆ ಸಮೀಕ್ಷೆ ರೈತರ ಬೆಳೆಯ ಉತ್ಸವವೇ ಆಗಿದೆ. ಸಮೀಕ್ಷೆಗೆ ದೊರೆತಿರುವ ಅಭೂತಪೂರ್ವ ಸ್ಪಂದನೆ ಕಂಡು ಆಗಸ್ಟ್ 24 ರವರೆಗೆ ನಿಗದಿಗೊಳಿಸಲಾಗಿದ್ದ ರೈತ ಬೆಳೆ ಆ್ಯಪ್ ಸಮೀಕ್ಷೆಯ ಅವಧಿಯನ್ನು ಇನ್ನು ಸ್ವಲ್ಪದಿನಗಳ ಕಾಲ ವಿಸ್ತರಿಸಲಾಗಿದೆ. ಕೇಂದ್ರ ಸರ್ಕಾರವು ಸಹ ರಾಜ್ಯದ ಈ ಕ್ರಾಂತಿಕಾರಕ ಹಾಗೂ ರೈತೋಪಯೋಗಿ ಆ್ಯಪ್ ಸಮೀಕ್ಷೆಯಿಂದ ಪ್ರೇರಿತಗೊಂಡಿದ್ದು, ದೇಶದ ಇತರೆ ಜಿಲ್ಲೆಗಳಲ್ಲಿಯೂ ಸಹ ಜಾರಿಗೊಳಿಸಲು ಮುಂದಾಗಿದೆ ಎಂದರು.
ವರದಿ- ಸುಪ್ರಿಯಾ ಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು.