ಚಿತ್ತೂರ್ : ಪವರ್ ಸ್ಟಾರ್ ಎನಿಸಿಕೊಂಡಿರುವ ತೆಲುಗು ಚಿತ್ರರಂಗದ ನಟ, ರಾಜಕಾರಣಿ ಪವನ್ ಕಲ್ಯಾಣ್ ಅವರ ಹುಟ್ಟು ಹಬ್ಬದ ಅಂಗವಾಗಿ ಪೋಸ್ಟರ್ ಹಾಕಲು ಯತ್ನಿಸಿದ್ದ ಮೂವರು ಯುವಕರು ವಿದ್ಯುತ್ ತಗುಲಿ ದುರ್ಮರಣ ಹೊಂದಿರುವ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ.ಇಂದು ಪವನ್ ಕಲ್ಯಾಣ್ ರವರ ಹುಟ್ಟುಹಬ್ಬದ ಸಂಭ್ರಮ ತಮ್ಮ ನೆಚ್ಚಿನ ನಟನ ಪೋಸ್ಟರ್ ದೊಡ್ಡದಾಗಿರಬೇಕೆಂಬ ಆಸೆಯಿಂದ ಚಿತ್ತೂರು ಜಿಲ್ಲೆಯ ಶಾಂತಿಪುರಂ ತಾಲೂಕಿನ ಕನಮಲದೊಡ್ಡಿ ಗ್ರಾಮದಲ್ಲಿ ಪವನ್ ಕಲ್ಯಾಣ್ ಅವರ 40 ಅಡಿ ಎತ್ತರದ ಪೋಸ್ಟರ್ ಹಾಕಲು ಒಟ್ಟು ಏಳು ಮಂದಿ ಯತ್ನಿಸಿದ್ದರು. ಇನ್ನೇನು ಪೋಸ್ಟರ್ ಹಾಕಿ ಮುಗಿಸುತ್ತಿದ್ದಂತೆ, ಮೃತರ ಪೈಕಿ ಒಬ್ಬಾತ ಪಕ್ಕದಲ್ಲಿದ್ದ 6.5 ಕೆವಿ ಎಲೆಕ್ಟ್ರಿಕ್ ತಂತಿಯನ್ನು ಮುಟ್ಟಿದ್ದಾನೆ, ನಂತರ ಹತ್ತಿರದಲ್ಲಿದ್ದ ಆತನ ಸೋದರ ಹಾಗೂ ಒಬ್ಬ ಸ್ನೇಹಿತನಿಗೂ ವಿದ್ಯುತ್ ಹರಿದಿದೆ. ಮೂವರು ಮೃತಪಟ್ಟಿದ್ದಾರೆ. ಉಳಿದ ನಾಲ್ವರು ಗಾಯಗೊಂಡಿದ್ದಾರೆ ಎಂದು ಕುಪ್ಪಂ ಸರ್ಕಲ್ ಇನ್ಸ್ ಪೆಕ್ಟರ್ ಯತೀಂದ್ರ ಹೇಳಿದ್ದಾರೆ. ಈ ಘಟನೆ ಬಗ್ಗೆ ನಟ ಮತ್ತು ಜನ ಸೇನಾ ಪಾರ್ಟಿ(ಜೆಎಸ್ ಪಿ) ಮುಖ್ಯಸ್ಥ ಪವನ್ ಕಲ್ಯಾಣ್ ತೀವ್ರ ದುಃಖ ವ್ಯಕ್ತಪಡಿಸಿದ್ದು, ಮೃತರ ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಜನ ಸೇನಾ ಪಕ್ಷದಿಂದ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪ್ರಕಟಿಸಿದ್ದಾರೆ.
ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು