ತಿಪಟೂರು: ಸಾಮಾಜಿಕ ಅಂತರವಿಲ್ಲ- ಕೊರೋನಾದ ಭಯ ಮೊದಲೇ ಇಲ್ಲ. ತಿಪಟೂರು ತಾಲ್ಲೂಕು ಹೊನ್ನವಳ್ಳಿ ಹೋಬಳಿಯಲ್ಲಿ ಯೂರಿಯಾ ಗೊಬ್ಬರ ಬರಲಿದೆ ಎಂಬ ಸುದ್ದಿ ಕೇಳಿ ನೂರಾರು ರೈತರು ಗೊಬ್ಬರದ ಅಂಗಡಿ ಮುಂದೆ ಜಮಾಯಿಸಿದ್ದು, ಗೊಬ್ಬರದ ಲಾರಿ ಬರುತ್ತಿದ್ದಂತೆಯೇ ಗೊಬ್ಬರ ಸಿಗುತ್ತದೋ ಇಲ್ಲವೋ ಎಂಬ ಆತಂಕದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಿಲಾಂಜಲಿಯಿತ್ತು ನೂಕುನುಗ್ಗಲಿನಲ್ಲಿ ಗೊಬ್ಬರ ಪಡೆದರು. ಗೊಬ್ಬರ ಕೊಳ್ಳಲು ಸುಮಾರು ಆರುನೂರರಿಂದ ಏಳುನೂರುಕ್ಕೂ ಹೆಚ್ಚು ರೈತರು ಜಮಾಯಿಸಿದ್ದರು.ಇದರಿಂದಾಗಿ ಜಮಾವಣೆಗೆ ಕಾರಣಾವಾಗಿ ನೂಕುನುಗ್ಗಲು ಕಂಡುಬಂತು. ಒಮ್ಮೆಲೆ ಗೊಬ್ಬರ ಸಿಕ್ಕುತ್ತದೋ ಇಲ್ಲವೋ ಎಂಬ ಆತಂಕದಲ್ಲಿ ನಾಮುಂದು ತಾಮುಂದು ಎಂದು ರೈತರು ಗೊಬ್ಬರಕ್ಕೆ ಮುಗಿಬಿದ್ದರು. ತಿಪಟೂರು ತಾಲೂಕಿನಾದ್ಯಂತ ಕಳೆದ ರಾತ್ರಿ ಉತ್ತಮ ಮಳೆಯಾಗಿದ್ದು ಅದಕ್ಕೂ ಒಂದು ವಾರ ಹಿಂದಿನಿಂದಲೂ ಮಳೆಯಾಗುತ್ತಿದ್ದು ರೈತರು ನಾಟಿ ಮಾಡಿರುವ ರಾಗಿ ಪೈರಿಗೆ ಮೇಲುಗೊಬ್ಬರವಾಗಿ ಯೂರಿಯಾ ಅವಶ್ಯಕತೆ ಇತ್ತು. ರೈತರ ಬೇಡಿಕೆಗೆ ತಕ್ಕಂತೆ ಕಳೆದೊಂದು ವಾರದಿಂದ ಗೊಬ್ಬರ ಸಿಗದ ಕಾರಣ ಬೇಡಿಕೆ ದುಪ್ಪಟ್ಟಾಗಿತ್ತು.ವಾರದ ಮುಂಚೆಯೇ ಗೊಬ್ಬರದ ಅವಶ್ಯಕತೆ ಇದ್ದು ಹೊನ್ನವಳ್ಳಿ ಹೋಬಳಿಯಾದ್ಯಂತ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಇಂದು ಗೊಬ್ಬರಕ್ಕಾಗಿ ರೈತರು ದ್ವಿಚಕ್ರವಾಹನ, ಆಟೋ, ಟ್ರ್ಯಾಕ್ಟರ್ ಗಳಲ್ಲಿ ಜಮಾಯಿಸಿದ್ದರು. ಗೊಬ್ಬರದ ನೂಕುನುಗ್ಗಲಿನಲ್ಲಿ ಸಾಮಾಜಿಕ ಅಂತರ ಮಾಯಾವಾಗಿತ್ತಲ್ಲದೇ ಕೊರೋನಾ ಬಗ್ಗೆಯಂತೂ ಯಾರಲ್ಲೂ ಆತಂಕದ ಲವಲೇಶವೂ ಕಂಡುಬರಲಿಲ್ಲ..
ವರದಿ- ಸಿದ್ದೇಶ್ವರ ಸಿಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.