ನಾಗಮಂಗಲ: ಮಂಡ್ಯ ಜಿಲ್ಲೆ, ನಾಗಮಂಗಲ ತಾ.ಪಂ.ಉಪಾಧ್ಯಕ್ಷ ಸ್ಥಾನಕ್ಕಾಗಿ ಮಂಗಳವಾರ ನಡೆದ ಚುನಾವಣೆಯಲ್ಲಿ ಮಾಜಿ ಸಚಿವ ಚಲುವರಾಯಸ್ವಾಮಿ ಬಣದ ಭಾರತಿ ಬಸವರಾಜು ಅವಿರೋಧವಾಗಿ ಆಯ್ಕೆಯಾದರು. ಈ ಹಿಂದೆ ಉಪಾಧ್ಯಕ್ಷರಾಗಿದ್ದ ಜಯಲಕ್ಷ್ಮಮ್ಮ ಬಸವಲಿಂಗೇಗೌಡರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೆ.01 ಕ್ಕೆ ನಿಗಧಿಯಾಗಿದ್ದರು ಮಾಜಿ ರಾಷ್ಟ್ರಪತಿ ನಿಧನದಿಂದ ಚುನಾವಣೆಯನ್ನು ಮಂಗಳವಾರಕ್ಕೆ ಮುಂದೂಡಿ ಚುನಾವಣಾಧಿಕಾರಿಗಳಾಗಿದ್ದ ಪಾಂಡವಪುರ ಉಪವಿಭಾಗಾಧಿಕಾರಿಗಳು ಆದೇಶ ಹೊರಡಿಸಿದ್ದರು. ಒಟ್ಟು 18 ಸದಸ್ಯ ಬಲವಿರುವ ತಾ.ಪಂ.ಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕಾಗಿ ನೆಲ್ಲಿಗೆರೆ ಕ್ಷೇತ್ರದ ಭಾರತಿ ಬಸವರಾಜು ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದ ತರುವಾಯ ನಾಮಪತ್ರ ಸಲ್ಲಿಸುವ ಮತ್ತು ಹಿಂಪಡೆಯುವ ಸಮಯ ಮುಗಿಯುತ್ತಿದ್ದಂತೆ ಉಪಾಧ್ಯಕ್ಷ ಸ್ಥಾನದ ಫಲಿತಾಂಶವನ್ನು ಚುನಾವಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದ ಎಸಿ ಶಿವಾನಂದಮೂರ್ತಿ ಅಧಿಕೃತವಾಗಿ ಘೋಷಿಸಿದರು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಚಲುವರಾಯಸ್ವಾಮಿ ಅಭಿಮಾನಿಗಳು ಪಟಾಕಿ ಸಿಡಿಸುವ ಜತೆಗೆ ಸಿಹಿ ಹಂಚಿ ಸಂಭ್ರಮಿಸಿದರು.ಈ ಬಗ್ಗೆ ಮಾದ್ಯಮಗಳೊಂದಿಗೆ ಮಾತನಾಡಿದ ತಾ.ಪಂ.ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಕೆಲವೇ ದಿನಗಳ ಹಿಂದೆ ಎಪಿಎಂಸಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ತಮ್ಮ ಬೆಂಬಲಿಗನನ್ನು ಗೆಲ್ಲಿಸಿಕೊಳ್ಳುವ ಮೂಲಕ ಗೆಲುವಿನ ನಗೆಬೀರಿದ್ದ ಶಾಸಕ ಸುರೇಶ್ಗೌಡರಿಗೆ ತಾ.ಪಂ. ಉಪಾಧ್ಯಕ್ಷರ ಸ್ಥಾನ ಕೈತಪ್ಪುವ ಮೂಲಕ ಮುಖಭಂಗವಾಗಿದೆ. ತಮ್ಮದೆ ಬೆಂಬಲಿತ ಸದಸ್ಯ ಅಧ್ಯಕ್ಷರಾಗಿದ್ದರೂ ಉಪಾಧ್ಯಕ್ಷ ಸ್ಥಾನವನ್ನು ತಮ್ಮದಾಗಿಸಿಕೊಳ್ಳುವಲ್ಲಿ ವಿಫಲರಾದ ಶಾಸಕರು ತಮ್ಮ ರಾಜಕೀಯ ವಿರೋಧಿ ಮಾಜಿ ಸಚಿವ ಚಲುವರಾಯಸ್ವಾಮಿ ಬಣಕ್ಕೆ ಧಾರೆಯೆರೆದುಕೊಟ್ಟಾಂತಾಗಿದೆ. ಈ ಫಲಿತಾಂಶ ಮುಂಬರುವ ಗ್ರಾಮ ಪಂಚಾಯ್ತಿ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿ ಎಂದರು.
ವರದಿ-ಎಸ್.ವೆಂಕಟೇಶ್.ಎಕ್ಸ್ ಪ್ರೆಸ್ ಟಿವಿ ನಾಗಮಂಗಲ,