ಆನೇಕಲ್:ಕೇಂದ್ರ ಸರ್ಕಾರ ನಾನ್ ಗೆಜೆಟೆಡ್ ಹುದ್ದೆಗಳಿಗೆ ಏಕರೂಪವಾಗಿ ನೇಮಕಾತಿ ಮಾಡಲು ಮುಂದಾಗಿರುವ ಕುರಿತು ನಿರ್ಮಲಾ ಸೀತಾರಾಮನ್ ಅವರ ಹೇಳಿಕೆಯನ್ನು ವಿರೋಧಿಸಿ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಆನೇಕಲ್ ತಾಲೂಕಿನ ಜಯಕರ್ನಾಟಕ ಸಂಘಟನೆ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡಿದ್ದು ಆನೇಕಲ್ ತಾಲೂಕು ಕಚೇರಿ ಮುಂಭಾಗ ಸುಮಾರು ನೂರಕ್ಕೂ ಹೆಚ್ಚು ಮಂದಿ ಪ್ರತಿಭಟನಾಕಾರರು ಪಾಲ್ಗೊಂಡು ರಾಷ್ಟ್ರೀಯ ನೇಮಕಾತಿ ನೀತಿಯ ಬದಲಾವಣೆಗಾಗಿ ಕೇಂದ್ರ ಸರಕಾರಕ್ಕೆ ಒತ್ತಾಯ ವ್ಯಕ್ತಪಡಿಸಿದರು.ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ರಾಷ್ಟ್ರೀಯ ನೇಮಕಾತಿ ನೀತಿಯ ಆಧಾರಿಸಿ ನಾನ್ ಗೆಜೆಟೆಡ್ ಹುದ್ದೆಗಳಿಗೆ ಏಕರೂಪವಾಗಿ ನೇಮಕಾತಿಯನ್ನು ಮಾಡಲು ನೂತನ ನೀತಿಯೊಂದನ್ನು ರಚನೆ ಮಾಡಲು ಹೊರಟಿದ್ದಾರೆ.ಈ ನೂತನ ನೀತಿಯಿಂದ ಪ್ರಾದೇಶಿಕ ಭಾಷೆಗಳ ಪ್ರಾಮುಖ್ಯತೆ ಕಡಿಮೆಯಾಗುತ್ತದೆ.ಜೊತೆಗೆ ಗ್ರಾಮೀಣ ಭಾಗದವರು ಕೇವಲ ಹಿಂದಿ ಇಂಗ್ಲಿಷ್ ನಲ್ಲಿ ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾಗಲು ಕಷ್ಟಕರವಾಗುತ್ತದೆ.ಬೇರೆ ರಾಜ್ಯದಿಂದ ಬರುವ ಅಧಿಕಾರಿಗಳಿಗೆ ಇಲ್ಲಿನ ಭಾಷೆ ನೆಲ ಸಂಸ್ಕೃತಿ ಸಂಪ್ರದಾಯಗಳ ಕೊರತೆ ಉಂಟಾಗಿ ಜನಸಾಮಾನ್ಯರಿಗೂ ಹಾಗೂ ಅಧಿಕಾರಿಗಳಿಗೂ ಬಹಳಷ್ಟು ಗೊಂದಲಗಳು ಉಂಟಾಗುವ ಸಾಧ್ಯತೆಗಳಿವೆ ಹಾಗು ಈಗ ಇರುವ ಉದ್ಯೋಗ ಸಮಸ್ಯೆಗಳ ಜೊತೆ ಇನ್ನು ನಿರುದ್ಯೋಗ ಸಮಸ್ಯೆಗಳು ಹೆಚ್ಚುತ್ತವೆ ಈ ಎಲ್ಲ ಕಾರಣಗಳಿಂದಾಗಿ ಕೇಂದ್ರ ಸರಕಾರ ರಾಷ್ಟ್ರೀಯ ನೇಮಕಾತಿ ನೀತಿಯನ್ನು ಏಕರೂಪವಾಗಿ ನಡೆಸುವ ಯೋಜನೆಯನ್ನು ಕೈಬಿಡಬೇಕು ಎಂದು ಪ್ರತಿಭಟನಾಕಾರರು ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಂಡರು.
ವರದಿ-ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್