ನಾಗಮಂಗಲ: ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ ಹಾಗೂ ಮಾಜಿ ಸಿಎಂ ಹೆಚ್ಡಿಕೆ ಬಗ್ಗೆ ಮಾತನಾಡುವ ಯಾವ ನೈತಿಕತೆಯನ್ನು ಮಾಜಿ ಶಾಸಕ ಚಲುವರಾಯಸ್ವಾಮಿ ಉಳಿಸಿಕೊಂಡಿಲ್ಲ ಎಂದು ಮನ್ಮುಲ್ ನಿರ್ದೇಶಕ ನೆಲ್ಲಿಗೆರೆ ಬಾಲು ಆಕ್ರೋಶ ವ್ಯಕ್ತಪಡಿಸಿದರು. ಪಟ್ಟಣದ ಪ್ರವಾಸಿಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶೀಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷದಲ್ಲಿದ್ದಾಗ ಹೋಗಳುವುದು, ಪಕ್ಷ ಬಿಟ್ಟ ನಂತರ ತೆಗಳುತ್ತಿರುವುದು ಅವರ ಘನತೆಗೆ ಶೋಭೆಯಲ್ಲ. ದೇವೇಗೌಡರ ರೈತಪರ ಹೋರಾಟವನ್ನು ಇಡೀ ದೇಶವೇ ಕಂಡಿದೆ. ಅವರ ಹೋರಾಟದ ಬಗ್ಗೆ ಅಣಕಿಸಲು ಇವರಿಗೆ ಯಾವ ಯೋಗ್ಯತೆ ಇದೆ. ದೇವೇಗೌಡರ ಮತ್ತು ಕುಮಾರಸ್ವಾಮಿರವರು ಜಿಲ್ಲೆಗೆ ಮತ್ತು ಈ ತಾಲೂಕಿಗೆ ನೀಡಿರುವ ಕೊಡುಗೆ ಏನೆಂಬುವುದರ ಬಗ್ಗೆ ಚೆಲುವರಾಯಸ್ವಾಮಿ ಆತ್ಮಾವಲೋಕನ ಮಾಡಿಕೊಳ್ಳಲಿ. ಒಂದು ವೇಳೆ ಮರೆತಿದ್ದರೆ ನನ್ನ ಬಳಿ ಸಿಆರ್ಎಸ್ ಅಧಿಕಾರವಧಿಯಲ್ಲಿ ಆದಂತಹ ಕೈಪಿಡಿ ಪುಸ್ತಕವಿದೆ ಕೊಡುತ್ತೇನೆ ಓದಿಕೊಳ್ಳಲಿ. ಈ ಹಿಂದೆ 16 ವರ್ಷಗಳ ಕಾಲ ಅವರ ಜೊತೆಯಲ್ಲಿದ್ದು ರಾಜಕಾರಣ ಮಾಡಿದ್ದೇನೆ. ಜಿಲ್ಲೆಗೆ ಇವರ ವೈಯಕ್ತಿಕ ಕೊಡುಗೆ ಏನೆಂಬುದು ನನಗೆ ಗೊತ್ತಿದೆ. ಈ ಹಿಂದೆ ತಾಲೂಕಿನಲ್ಲಿ ಕೈಗಾರಿಕೋದ್ಯಮ ಬೇಕೆನ್ನುತ್ತಿದ್ದವರು ಇಂದು ಬೇಡ ಎಂದು ಬೊಬ್ಬೆ ಹೊಡೆಯುತ್ತಿರುವ ಇಂದಿನ ನಡೆಯ ರಹಸ್ಯ ಬಹಿರಂಗವಾಗಬೇಕಿದೆ ಎಂದು ಸವಾಲು ಹಾಕಿದರು. ತಾಲೂಕಿನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಾಳಿಂಗನಹಳ್ಳಿ ಗ್ರಾ.ಪಂ.ವ್ಯಾಪ್ತಿಯಲ್ಲಿ ಕೈಗಾರೀಕರಣ ಉದ್ದೇಶಕ್ಕಾಗಿ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಚಲುವರಾಯಸ್ವಾಮಿ ಹೇಳಿಕೆಗೆ ಸ್ಪಷ್ಠೀಕರಣ ನೀಡಿ, ತಾಲೂಕಿನ ಯುವ ಜನತೆ ಉದ್ಯೋಗ ಹರಸಿ ವಲಸೆ ಹೋಗುವುದನ್ನು ತಡೆಯುವ ಉದ್ದೇಶದಿಂದ ಮೈತ್ರಿ ಸರ್ಕಾರದ ಸಿಎಂ ಆಗಿದ್ದ ಕುಮಾರಸ್ವಾಮಿರವರಿಗೆ ಕೈಗಾರಿಕೆ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಚುಂಚಶ್ರೀಗಳ ನೇತೃತ್ವದಲ್ಲಿ ಶಾಸಕರಾದ ಸುರೇಶ್ಗೌಡ ಹಾಗೂ ಅಪ್ಪಾಜಿಗೌಡರ ಸಮ್ಮುಖದಲ್ಲಿ ಮಾತುಕತೆ ನಡೆಸಿದ್ದರು. ಕೈಗಾರಿಕೆಗಳ ಸ್ಥಾಪನೆಗಾಗಿ ರಾಜ್ಯಾದ್ಯಂತ ಬೇಡಿಕೆ ಇದ್ದರೂ ಶ್ರೀಗಳ ಆಶಯದಂತೆ ತಾಲೂಕಿನಲ್ಲಿ ಕೈಗಾರಿಕೆ ಸ್ಥಾಪನೆಗೆ ಯಾವುದೇ ಸ್ಥಳ ನಿಗಧಿಪಡಿಸದೆ 500 ಎಕರೆ ಭೂಸ್ವಾಧೀನಕ್ಕೆ ಅನುಮೋದನೆ ನೀಡಲಾಗಿತ್ತು. ಆದರೆ ತದನಂತರ ಬಂದ ಬಿಜೆಪಿ ಸರ್ಕಾರ ಚುಂಚಶ್ರೀಗಳನ್ನೊಳಗೊಂಡಂತೆ ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಾರಾದೆ ಏಕಾಏಕಿ 1277 ಎಕರೆ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಬಿಜೆಪಿ ಸರ್ಕಾರದ ನಡೆಯ ಹಿಂದಿನ ಕಾಣದ ಕೈ ಯಾರದೆಂಬುದನ್ನು ತಾಲೂಕಿನ ಜನತೆ ಅರಿಯಬೇಕಿದೆ ಎಂದರು.ಈ ಸಂದರ್ಭ ಎಪಿಎಂಸಿ ಸದಸ್ಯ ಚನ್ನಪ್ಪ, ಜೆಡಿಎಸ್ ಮುಖಂಡರಾದ ಅಶೋಕ್ ಮತ್ತು ನಾಗೇಶ್ ಇದ್ದರು.
ವರದಿ- ಎಸ್.ವೆಂಕಟೇಶ್.ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.