ನಾಗಮಂಗಲ: ರಾಜಕೀಯ ಜಿದ್ದಾ ಜಿದ್ದಿಗೆ ರಾಜ್ಯದಲ್ಲೆ ಮನೆ ಮಾತಾಗಿರುವ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ, ನಾಗಮಂಗಲ ತಾಲೂಕಿನಲ್ಲಿ ಗ್ರಾಮ ಪಂಚಾಯ್ತಿ ಚುನಾವಣಾ ಅಖಾಡ ಆರೋಪ-ಪ್ರತ್ಯಾರೋಪಗಳ ಮೂಲಕ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ವಿಷಯವಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಪ್ರಸನ್ನ ಗುರುವಾರ ತಹಸೀಲ್ದಾರ್ ಭೇಟಿಯ ನಂತರ ಶಾಸಕ ಸುರೇಶ್ ಗೌಡರ ವಿರುದ್ದ ನಡೆಸಲಾಗಿದ್ದು, ವಾಗ್ದಾಳಿಯ ವಿರುದ್ದ ಇಂದು ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ಶಾಸಕ ಸುರೇಶ್ ಗೌಡರ ಅನುಯಾಯಿಗಳು ತಹಸೀಲ್ದಾರ್ ಕುಂಞ ಅಹಮ್ಮದ್ ರವರಿಗೆ ಕಾನೂನು ಬಾಹಿರವಾಗಿ ಹೆಸರು ಸೇರ್ಪಡೆ ಮಾಡದಂತೆ ಮನವಿ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮನ್ಮುಲ್ ನಿರ್ದೇಶಕ ನೆಲ್ಲಿಗೆರೆ ಬಾಲು, ಶಾಸಕ ಸುರೇಶ್ ಗೌಡರ ಅವಧಿಯಲ್ಲಿ ತಾಲ್ಲೂಕಿನಾದ್ಯಂತ ಶಾಂತಿ ಸೌಹಾರ್ಧತೆಯ ವಾತವರಣವಿದೆ. ಇಂತಹ ಪರಿಸ್ಥಿತಿಯಲ್ಲಿ ತಹಸೀಲ್ದಾರ್ ಎದುರು ಕೂತು ಲಾಂಗ್, ಮಚ್ಚುಗಳ ಬಗ್ಗೆ ಮಾತನಾಡುವ ರೌಡಿಶೀಟರ್ ಎಂ.ಪ್ರಸನ್ನನಿಗೆ ಶಾಸಕರ ನೈತಿಕತೆ ಬಗ್ಗೆ ಮಾತನಾಡುವ ಯಾವ ಮಾನದಂಡವೂ ಉಳಿದಿಲ್ಲ. ಇನ್ನೊಬ್ಬರ ಬಗ್ಗೆ ಮಾತನಾಡುವ ಮೊದಲು ತನ್ನ ಯೋಗ್ಯತೆ ಬಗ್ಗೆ ತಿಳಿದುಕೊಳ್ಳಬೇಕು.ನಮ್ಮ ತಾಲೂಕಿನಲ್ಲಿ ಆಗಿರುವ ಕೆಲಸಗಳ ಬಗ್ಗೆ ಬಹಿರಂಗ ಚರ್ಚೆಗೆ ನಾವು ಸಿದ್ದ. ಅದೇನೋ ಪಟ್ಟೆ ಬರೆಯುವುದಾಗಿ ಹೇಳಿಕೆ ಕೊಟ್ಟರೆ ಸಾಲದು, ತಾಕತ್ತಿದ್ದರೆ ಬಹಿರಂಗ ಅಖಾಡಕ್ಕೆ ಬಾ ಈಗಾಗಲೇ ಜನ ನಿಮಗೆ ನೀಡಿರುವ ಮರ್ಯಾದೆ ಸಾಲದಿದ್ದರೆ, ಮುಂದಿನ ಕೆಲವೇ ದಿನಗಳ ಗ್ರಾಮ ಪಂಚಾಯ್ತಿ ಚುನಾವಣೆ ತನಕ ಕಾಯಿರಿ. ಬೆಳಿಗ್ಗೆ ಹೊತ್ತು ಕಾಂಗ್ರೆಸ್-ರಾತ್ರಿ ವೇಳೆ ಬಿಜೆಪಿಗೆ ಛತ್ರಿ ಹಿಡಿಯುವ ಇವರ ನಿಜ ಬಣ್ಣ ಜನತೆಗೆ ಗೊತ್ತಿದೆ. ಇನ್ನು ಮುಂದಾದರೂ ಶಾಸಕರ ಬಗ್ಗೆ ಲಘುವಾಗಿ ಮಾತನಾಡುವುದನ್ನು ಬಿಡದಿದ್ದರೆ ಮುಂದಿನ ಎಲ್ಲಾ ಅವಘಡಗಳಿಗೆ ನೀನೆ ಹೊಣೆಯಾಗ ಬೇಕಾಗುತ್ತದೆ ಎಂದು ಎಚ್ಚರಿಸಿದರು. ಮತ್ತೊಬ್ಬ ಮನ್ಮುಲ್ ನಿರ್ದೇಶಕ ಕೋಟಿರವಿ ಮಾತನಾಡಿ, ಸುರೇಶ್ ಗೌಡ ಎಂಬ ಅಶ್ವಮೇಧದ ಕುದುರೆಯನ್ನು ಕಟ್ಟಲಾಗದೆ ಹತಾಶರಾಗಬೇಡಿ. ಶಾಸಕರ ವೈಯಕ್ತಿಕ ತೇಜೋವಧೆಗೆ ಮುಂದಾದರೆ ನಿಮ್ಮ ಅಕ್ರಮ ಪುರಾಣಗಳು ಬಯಲಾಗುತ್ತವೆ. ಮನ್ಮುಲ್ ಚುನಾವಣೆಯಲ್ಲಿ ಸೋತವರಿಂದ ನಾಮನಿರ್ದೇಶನ ಮಾಡಿಸ್ತೀನಿ ಆಂತ ಎಷ್ಟು ಲಕ್ಷ ತೆಗೊಂಡಿದ್ದಿ ಅಂತ ನಿನ್ನ ಆತ್ಮಸಾಕ್ಷಿ ಕೇಳ್ಕೊ. ನಿನಗೇನಾದರೂ ಮಾನ-ಮರ್ಯಾದೆ ಇದ್ದರೆ ಮೌನವಾಗಿರೊದು ಒಳ್ಳೆಯದು ಎಂದರು, ಈ ಸಂದರ್ಭ ಕುರುಬರ ಸಂಘದ ತಾಲೂಕು ಅಧ್ಯಕ್ಷ ಬಸವೇಗೌಡ ಮಾತನಾಡಿದರು. ಎಪಿಎಂಸಿ ಸದಸ್ಯ ಚನ್ನಪ್ಪ,ಜಿ.ಪಂ.ಸದಸ್ಯ ಮುತ್ತಣ್ಣ, ತಾ.ಪಂ.ಸದಸ್ಯ ಹೇಮರಾಜ್, ಪುರಸಭಾ ಸದಸ್ಯರಾದ ವಿಜಯ್ ಕುಮಾರ್ ಹಾಗೂ ಜಾಫರ್ ಸೇರಿದಂತೆ 500 ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಇದ್ದರು.
ವರದಿ-ಎಸ್.ವೆಂಕಟೇಶ್.ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.