ಕೋಲಾರ: ಕೋಲಾರ ಜಿಲ್ಲೆಯಲ್ಲಿರುವ ಸರ್ಕಾರದ ಅಧೀನಕ್ಕೊಳಪಟ್ಟಿರುವ ಸರ್ಕಾರಿ ಖರಾಬು, ಗುಂಡುತೋಪು, ಸ್ಮಶಾನ, ಕೆರೆಗಳು, ರಾಜಕಾಲುವೆಗಳನ್ನು ಕಬಳಿಸಲು ಭೂಮಾಫಿಯಾದವರು ಯತ್ನಿಸುತ್ತಿದ್ದು, ಇದಕ್ಕೆ ಕಂದಾಯ ಇಲಾಖೆಯ ಕೆಲವು ಭ್ರಷ್ಟ ಅಧಿಕಾರಿಗಳು ಸಹಕಾರ ನೀಡುತ್ತಿದ್ದಾರೆಂಬ ಗಂಭೀರ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದ್ದು, ಕೂಡಲೇ ಕಂದಾಯ ಸಚಿವರಾದ ಆರ್.ಅಶೋಕ್ ರವರು ಕೋಲಾರ ಜಿಲ್ಲೆಗೆ ಭೇಟಿ ನೀಡಿ ಕಂದಾಯ ಅಧಿಕಾರಿಗಳ ಸಭೆ ನಡೆಸಿ ಅಕ್ರಮಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ತಪ್ಪಿತಸ್ಥ ಹಾಗೂ ಭ್ರಷ್ಟ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ವಜಾಗೊಳಿಸಬೇಕೆಂದು ಕರ್ನಾಟಕ ರೈತಸೇನೆ ಕೋಲಾರ ಜಿಲ್ಲಾಧ್ಯಕ್ಷ ಕೋಟಿಗಾನಹಳ್ಳಿ ಗಣೇಶಗೌಡ ಕಂದಾಯ ಸಚಿವರನ್ನು ಒತ್ತಾಯಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿ ಮಾತನಾಡಿರುವ ಕೋಟಿಗಾನಹಳ್ಳಿ ಗಣೇಶಗೌಡ ಕೋಲಾರ ಜಿಲ್ಲೆಯಲ್ಲಿ ಸರ್ಕಾರದ ಗೋಮಾಳ ಜಮೀನುಗಳನ್ನು ಅಕ್ರಮವಾಗಿ ಕಬಳಿಸಲು ನಕಲಿದಾಖಲೆಗಳನ್ನು ಸೃಷ್ಟಿ ಮಾಡಿರುತ್ತಾರೆ. ಈ ಅಕ್ರಮಕ್ಕೆ ಸಹಕರಿಸಿದ ಸರ್ವೆ ಇಲಾಖೆಯ ಸರ್ವೆಯರ್ ಗಳ ಮೇಲೆ ಯಾಕೆ ಕ್ರಮ ಕೈಗೊಂಡಿರುವುದಿಲ್ಲ. ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರ್ ರವರುಗಳು ಜಾತಿ ಪ್ರಭಾವಕ್ಕೆ ಮತ್ತು ರಾಜಕೀಯ ಒತ್ತಡಕ್ಕೆ ಮಣಿದು ಸುಮ್ಮನಾಗಿದ್ದಾರೆಂಬ ಅನುಮಾನಗಳು ಸಾರ್ವಜನಿಕರಿಂದ ಕೇಳಿ ಬರುತ್ತದೆ. ನೆಪ ಮಾತ್ರಕ್ಕೆ ಅಕ್ರಮಗಳಿಗೆ ಸಹಕರಿಸಿದ ಕೆಳ ದರ್ಜೆಯ ಕಂದಾಯ ಅಧಿಕಾರಿಗಳನ್ನು ಅಮಾನತು ಮಾಡುತ್ತಾರೆ.ಜಿಲ್ಲೆಯಲ್ಲಿ ಸರ್ಕಾರದ ಜಮೀನುಗಳನ್ನು ಕಬಳಿಸಲು ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ಜೊತೆಗೆ ಪ್ರಭಾವಿ ವ್ಯಕ್ತಿಗಳು ನಕಲಿ ದಾಖಲೆಗಳನ್ನು ಸೃಷ್ಟಿಸುವಂತಹ ಜಾಲವೊಂದು ಕೆಲಸ ಮಾಡುತ್ತಿದ್ದು, ಜಿಲ್ಲಾಧಿಕಾರಿಗಳು ಈ ಕೂಡಲೇ ಅಕ್ರಮಗಳ ಬಗ್ಗೆ ಗಮನ ಹರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಗೌರವಾಧ್ಯಕ್ಷ ಅರಾಭಿಕೊತ್ತನೂರು ಮುನಿವೆಂಕಟಪ್ಪ, ಜಿಲ್ಲಾ ಉಪಾಧ್ಯಕ್ಷರಾದ ಸಿ.ವಿ.ಪ್ರಭಾಕರ್, ಜಿಲ್ಲಾ ಕಾರ್ಯಾಧ್ಯಕ್ಷ ಕಾಮಧೇನಹಳ್ಳಿ ವೆಂಕಟಾಚಲಪತಿ, ಸಂಘಟನಾ ಕಾರ್ಯದರ್ಶಿ ಮಕ್ಸೂದ್ಪಾಷ, ರೈತ ಮುಖಂಡರಾದ ನಾಗರಾಜ್, ತ್ಯಾಗರಾಜ್, ಅಗ್ರಹಾರಸೋಮರಸನಹಳ್ಳಿ ನಾರಾಯಣಸ್ವಾಮಿ, ಆನಂದ್ಗೌಡ, ಇಜಾರ್ಪಾಷ ಮತ್ತಿತರರು ಹಾಜರಿದ್ದರು.
ವರದಿ- ಬೆಟ್ಟಪ್ಪ ಎಕ್ಸ್ ಪ್ರೆಸ್ ಟಿವಿ ಕೋಲಾರ.