ಕಲಬುರಗಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾರನ್ನೂ ಕೈಬಿಟ್ಟಿಲ್ಲ. 17 ಜನರಿಗೆ ಯಡಿಯೂರಪ್ಪ ನ್ಯಾಯ ಒದಗಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ಒದಗಿಸುತ್ತಾರೆ ಎಂಟಿಬಿ ನಾಗರಾಜ್, ಆರ್.ಶಂಕರ್ ಅವರಿಗೂ ಸಚಿವಸ್ಥಾನ ಕೊಡುತ್ತಾರೆಂಬ ವಿಶ್ವಾಸವಿದೆ ಎಂದು ಕೃಷಿ ಸಚಿವರೂ ಆಗಿರುವ ಕೊಪ್ಪಳ ಜಿಲ್ಲಾ ಉಸ್ತುವಾರಿ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಇಲ್ಲಿನ ಸುದ್ದಿಗಾರರಿಗೆ ಡ್ರಗ್ಸ್ ಮಾಫಿಯಾ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಚಿತ್ರರಂಗ ಮೊದಲು ಈ ರೀತಿಯಾಗಿ ಇರಲಿಲ್ಲ. ಆದರೆ ಇತ್ತೀಚೆಗೆ ಯುವಜನಾಂಗ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ. ಡ್ರಗ್ಸ್ ನಂತಹ ದುಶ್ಚಟಗಳಿಗೆ ಬಲಿಯಾಗುವ ಮೂಲಕ ತಮ್ಮ ಆರೋಗ್ಯದ ಜೊತೆಗೆ ಸಮಾಜದ ಸ್ವಾಸ್ಥ್ಯವನ್ನು ಸಹ ಹಾಳು ಮಾಡುತ್ತಿದ್ದಾರೆ. ಡ್ರಗ್ ವ್ಯಸನಿ ಕಲಾವಿದರನ್ನು ಅನುಕರಿಸಿದರೆ ದೇಶಕ್ಕೆ ಮಾರಕವಾಗಲಿದೆ. ಡ್ರಗ್ಸ್ ವ್ಯಸನ ಚಿತ್ರರಂಗಕ್ಕೆ ಪೂರಕವಲ್ಲ. ಚಿತ್ರರಂಗದಲ್ಲಿಗಾ ನಮಸ್ಕಾರ ಅನ್ನುವ ಸಂಸ್ಕೃತಿ ಬಿಟ್ಟುಹೋಗಿ ಹಾಯ್, ಬಾಯ್ ಸಂಸ್ಕೃತಿ ಬಂದಿದೆ. ಆದರೆ ತಮ್ಮ ಅವಧಿಯಲ್ಲಿ ಕ್ಯಾಮೆರಾ ಮತ್ತು ಕ್ಯಾಮೆರಾಮೆನ್ ಗಳಿಗೂ ನಮಸ್ಕಾರ ಮಾಡುತ್ತಿದ್ದೆವು. ಹಿಂದಿನಂತಹ ಸಂಸ್ಕೃತಿ ಈಗ ಚಿತ್ರರಂಗದಲ್ಲಿ ಕಾಣಲಾಗುತ್ತಿಲ್ಲ. ಎಂದಿಗೂ ನಮ್ಮ ಸಂಸ್ಕೃತಿ ಪಾವಿತ್ರತೆಯನ್ನು ಕೈಬಿಡಬಾರದು ಎಂದರು. ಕ್ಯಾಸಿನೋಗೆ ಹೊರದೇಶದಲ್ಲಿ ಅನುಮತಿ ನೀಡಲಾಗಿದೆ. ಗೋವಾದಲ್ಲಿಯೂ ಇದೆ. ಕ್ಯಾಸಿನೋಗೆ ಹೋದ ಮಾತ್ರಕ್ಕೆ ಡ್ರಗ್ಸ್ ಸೇವಿಸುತ್ತಾರೆ ಎಂದರ್ಥವಲ್ಲ. ಜಮೀರ್ ಡ್ರಗ್ ಪೆಡ್ಲರ್ ಜೊತೆ ಸಂಪರ್ಕ ಹೊಂದಿದ್ದಾರೆಯೋ ಇಲ್ಲವೋ ಎಂಬುದು ತನಿಖೆಯಿಂದ ತಿಳಿಯಲಿದೆ. ಜಮೀರ್ ಆಗಾಗ ಪ್ರಚಾರಕ್ಕಾಗಿ ಹೇಳಿಕೆಗಳನ್ನು ಕೊಡುವುದು ಸಹಜ. ಮೊದಲು ಯಡಿಯೂರಪ್ಪ ಮನೆಗೆ ಕಾವಲುಗಾರನಾಗುತ್ತೇನೆ ಎಂದಿದ್ದರು. ಇದೀಗ ಆರೋಪ ಸಾಬೀತಾದರೆ ತಮ್ಮ ಆಸ್ತಿಯನ್ನು ಸರ್ಕಾರಕ್ಕೆ ಬರೆದುಕೊಡುವುದಾಗಿ ಹೇಳಿದ್ದಾರಷ್ಟೆ ಎಂದು ಬಿ.ಸಿ.ಪಾಟೀಲ್ ಹೇಳಿದರು.
ವರದಿ-ಸುಪ್ರಿಯಾ ಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು