ಪಿರಿಯಾಪಟ್ಟಣ: ಸ್ತ್ರೀಯರು ಆರೋಗ್ಯವಂತರಾಗಿದ್ದರೆ ಮಾತ್ರ ಆರೋಗ್ಯವಂತ ಕುಟುಂಬ ನಿರ್ಮಾಣವಾಗಲು ಸಾಧ್ಯ ಆ ನಿಟ್ಟಿನಲ್ಲಿ ಸ್ತ್ರೀಯರು ತಮ್ಮ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ವಹಿಸಬೇಕು ಎಂದು ಪಿರಿಯಾಪಟ್ಟಣ ತಾಲ್ಲೂಕಿನ ಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶ್ರೀವಳ್ಳಿರವರು ತಿಳಿಸಿದರು. ತಾಲ್ಲೂಕಿನ ಆವರ್ತಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಲಾಗಿದ್ದ ಪೋಷಣೆ ಅಭಿಯಾನ ಮಾಸಾಚರಣೆ ಹಾಗೂ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ ಸ್ತ್ರೀಯರು ಬಹುಪಾಲು ತಮ್ಮ ಕೌಟುಂಬಿಕ ನಿರ್ವಹಣೆಯಲ್ಲಿ ಕಾಲಕಳೆಯುತ್ತಾರೆ. ಅಂತಹ ಸ್ತ್ರೀಯರು ತಮ್ಮ ಕುಟುಂಬದ ಪೋಷಣೆಯ ಜೊತೆಗೆ ತಮ್ಮ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ವಹಿಸಬೇಕು. ಗರ್ಭಿಣಿಯರು ಗರ್ಭಾವಸ್ಥೆಯಲ್ಲಿದ್ದಾಗ ಅತ್ಯಂತ ಹೆಚ್ಚಿನ ಪೋಷಕಾಂಶವುಳ್ಳ ಆಹಾರ ಪದಾರ್ಥಗಳನ್ನು ಹೆಚ್ಚು ಹೆಚ್ಚು ಸೇವಿಸುವುದರ ಜೊತೆಗೆ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಇಂತಹ ಸಂದರ್ಭದಲ್ಲಿ ಯಾವುದೇ ಒತ್ತಡಕ್ಕೂ ಮಣಿಯದೆ ಅತ್ಯಂತ ಲವಲವಿಕೆಯಿಂದ ತಮ್ಮ ಕೆಲಸ ಕಾರ್ಯಗಳನ್ನು ನಿರ್ವಹಿಸುವುದರ ಜೊತೆಗೆ ಯಾವುದೇ ತೆರನಾದ ಭಾರವಾದ,ಕಷ್ಟಕರ ಕೆಲಸಗಳನ್ನು ನಿರ್ವಹಿಸಬಾರದು ಎಂದು ತಿಳಿಸಿದರು. ಆರೋಗ್ಯ ನಿರೀಕ್ಷಕರಾದ ಮುಜೀಬ್ ಮಾತನಾಡಿ ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರುಗಳಾಗಿರುತ್ತಾರೆ. ಅಂತಹ ತಾಯಂದಿರು ತಾಯಿತನದ ಸುಖವನ್ನು ಅನುಭವಿಸುವಂತಾಗಬೇಕು. ಪ್ರತಿ ಸ್ತ್ರೀಯರು ಕೂಡ ತಾಯಿತನದ ವ್ಯವಸ್ಥೆಯಲ್ಲಿರುವಾಗ ತಮ್ಮ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ವಹಿಸುವುದರ ಜೊತೆಗೆ ಉತ್ತಮ ಪೋಷಕಾಂಶವುಳ್ಳ ಆಹಾರವನ್ನು ಸೇವಿಸಬೇಕು. ಮತ್ತು ಕಾಲಕಾಲಕ್ಕೆ ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಗರ್ಭಾವಸ್ಥೆಯಲ್ಲಿರುವ ಮಗು ಆರೋಗ್ಯಕರವಾಗಿ ಬೆಳವಣಿಗೆಯಾಗುತ್ತಿದೆ ಎಂಬ ಮನವರಿಕೆಗೆ ಪ್ರತಿಯೊಬ್ಬ ಗರ್ಭಿಣಿ ಸ್ತ್ರೀಯರು ಮುಂದಾಗಬೇಕೆಂದು ತಿಳಿಸಿದರು. ಈ ಸಂದರ್ಭ ಅಂಗನವಾಡಿ ಕಾರ್ಯಕರ್ತೆಯರಾದ ಜಲಜಾಕ್ಷಿ, ಪುಷ್ಪ, ವಿನುತಾ,ಪಾರ್ವತಮ್ಮ, ಪಾರ್ವತಿ ,ಬೇಬಿಮ್ಪುಟ್ಟಲಕ್ಷ್ಮಿ, ವಿಶಾಲಿ, ಸೇರಿದಂತೆ ಇನ್ನಿತರರು ಹಾಜರಿದ್ದರು.
ವರದಿ- ಮಾಗಳಿ ರಾಮೇಗೌಡ ವರದಿಗಾರರು ಪಿರಿಯಾಪಟ್ಟಣ