ಬೆಂಗಳೂರು : ರಾಜ್ಯ ಸರ್ಕಾರ ವಿರುದ್ಧ ಸಿದ್ದರಾಮಯ್ಯ ಅವಿಶ್ವಾಸ ನಿರ್ಣಯ ಮಂಡಿಸಿದ್ದು, ಈ ಹಿನ್ನೆಲೆ ಇಂದು ವಿಧಾನಸಭೆಯಲ್ಲಿ ಸಿಎಂ ಬಿ.ಎಸ್ ಯಡಿಯೂರಪ್ಪ ಬಹುಮತ ಸಾಬೀತು ಪಡಿಸಲಿದ್ದಾರೆ. ಈಗಾಗಲೇ ಅವಿಶ್ವಾಸ ಗೊತ್ತುವಳಿ ಮಂಡಿಸಲಾಗಿದೆ. ಆದರೆ ಜೆಡಿಎಸ್ ಪಕ್ಷದವರು ಮಾತ್ರ ಇನ್ನು ಕಾಂಗ್ರೆಸ್ಗೆ ಬೆಂಬಲ ಸೂಚಿಸಿಲ್ಲ. ಇಂದು ಅಧಿವೇಶನದ ಕೊನೆಯ ದಿನವಾದ ಹಿನ್ನೆಲೆ ಅವಿಶ್ವಾಸ ನಿರ್ಣಯ ಮೊದಲಿಗೆ ಚರ್ಚೆ ನಡೆಯಲಿದ್ದು, ಸಭಾಧ್ಯಕ್ಷರು ಸರ್ಕಾರಕ್ಕೆ ಬಹುಮತ ಸಾಬೀತು ಪಡಿಸುವಂತೆ ಸೂಚನೆ ನೀಡಲಿದ್ದಾರೆ. ನಿನ್ನೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದ ಸಿಎಂ ಯಡಿಯೂರಪ್ಪ, ಎಲ್ಲಾ ಬಿಜೆಪಿ ಶಾಸಕರಿಗೆ ವಿಪ್ ಜಾರಿ ಮಾಡಿದ್ದಾರೆ. ಅಲ್ಲದೇ ಇಂದು ಸಂಜೆಯವರೆಗೂ ಎಲ್ಲಾ ಶಾಸಕರು ಸದನದಲ್ಲಿ ಇರುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಇನ್ನು ರಾಜ್ಯ ವಿಧಾನಸಭೆಯಲ್ಲಿ ಒಟ್ಟು 220 ಶಾಸಕರಿದ್ದಾರೆ. ಇದರಲ್ಲಿ ಬಿಜೆಪಿಯಲ್ಲಿ 117 ಶಾಸಕರಿದ್ದರೆ, ಕಾಂಗ್ರೆಸ್ನಲ್ಲಿ 66 ಹಾಗು ಜೆಡಿಎಸ್ನಲ್ಲಿ 33 ಶಾಸಕರಿದ್ದಾರೆ. ಮೂವರು ಪಕ್ಷೇತರ ಶಾಸಕರಿದ್ದು, ಹೆಚ್.ನಾಗೇಶ್ ಸಚಿವರಾಗಿರುವುದರಿಂದ ಬಿ.ಎಸ್ ಯಡಿಯೂರಪ್ಪಗೆ ಬೆಂಬಲ ಸೂಚಿಸಲಿದ್ದಾರೆ. ಹೀಗಾಗಿ 117+1 =118 ಶಾಸಕರು ಬಿ.ಎಸ್ ಯಡಿಯೂರಪ್ಪ ಪರ ಇದ್ದು, ಬಹುತೇಕ ಸರ್ಕಾರ ಸೇಫ್ ಆಗಲಿದೆ.
ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು