ಲಿಂಗಸೂಗೂರು: ರಾಯಚೂರು ಜಿಲ್ಲೆಯ ಲಿಂಗಸೂಗೂರು ಪುರಸಭೆಯ ಆಡಳಿತದ ವೈಖರಿ ಹೇಗಿದೆ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ಈ ಕಮಾನು. ಪಟ್ಟಣದ ಬಸವಸಾಗರ ಕ್ರಾಸ್ ನಿಂದ ಗಡಿಯಾರ ವೃತ್ತಕ್ಕೆ ಹೋಗುವ ರಸ್ತೆಯಲ್ಲಿ ಭಾರಿ ವಾಹನಗಳು ಪ್ರವೇಶಿಸದಂತೆ ಅಡ್ಡಲಾಗಿ ಒಂದು ಲಕ್ಷದ ಇಪ್ಪತೈದು ಸಾವಿರ ರೂಪಾಯಿ ವೆಚ್ಚದಲ್ಲಿ ಕಮಾನು ನಿರ್ಮಿಸುವ ಕಾಮಗಾರಿಯನ್ನು ಪುರಸಭೆ ಗುತ್ತಿಗೆದಾರರಿಗೆ ನೀಡಿತ್ತು. ಆದರೆ ಕಾಮಗಾರಿ ಮತ್ತು ಗುಣಮಟ್ಟದ ಬಗ್ಗೆ ಪುರಸಭೆ ಆಡಳಿತ ಅಧಿಕಾರಿಗಳಾಗಲಿ ಸಂಬಂದಿಸಿದ ಇಂಜಿನಿಯರ್ ಗಳಾಗಲಿ ಒಮ್ಮೆಯೂ ಈ ಕಾಮಗಾರಿಯನ್ನು ಪರಿಶೀಲಿಸಿಲ್ಲ. ಕಳಪೆ ಕಾಮಗಾರಿ ಮಾಡಿದ್ದರೂ ತಿರುಗಿ ನೋಡದ ಪರಿಣಾಮ ಕಾಮಗಾರಿ ಮುಗಿದು ಒಂದೇ ದಿನದಲ್ಲಿ ಕಬ್ಬಿಣದ ಕಮಾನು ಮುಗಿಚಿ ಬಿದ್ದಿದೆ. ಈ ಕಳಪೆ ಕಾಮಗಾರಿಯಿಂದಾಗಿ ಸರ್ಕಾರದ ಲಕ್ಷಾಂತರ ರೂಪಾಯಿ ಹಣ ಪೋಲಾಗಿದೆ. ಅಲ್ಲದೇ ಈ ಬಗ್ಗೆ ಪುರಸಭೆ ಅಧಿಕಾರಿಗಳನ್ನು ಕೇಳಿದರೆ ಕಮಾನಿಗೆ ವಾಹನಗಳು ಗುದ್ದಿದ ಪರಿಣಾಮ ಮುರಿದು ಬಿದ್ದಿದೆ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಅಲ್ಲದೇ ಇದೀಗ ಕಳಪೆಯಾಗಿ ನಿರ್ಮಾಣವಾಗಿ ಬಿದ್ದಿದ್ದ ಕಮಾನನ್ನು ತೆರವು ಮಾಡಿದ್ದಾರೆಯೇ ಹೊರತು ಗುತ್ತೆದಾರನ ಮೇಲೆ ಅದೇನು ಕ್ರಮ ಕೈಗೊಂಡಿದ್ದಾರೇ ಎಂಬ ಮಾಹಿತಿ ಮಾತ್ರ ಇಲ್ಲ. ಇನ್ನಾದರೂ ಸಂಬಂಧಪಟ್ಟ ಮೇಲಾಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳುಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ವರದಿ:ವೀರೇಶ್ ಅರಮನಿ ಎಕ್ಸ್ಪ್ರೆಸ್ ಟಿವಿ ಲಿಂಗಸೂಗೂರು.