ನಾಗಮಂಗಲ: ನಿಗಧಿಯಂತೆ ಇಂದು ನಡೆಯಬೇಕಿದ್ದ ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕು ಪಂಚಾಯ್ತಿ ಅಧ್ಯಕ್ಷರ ವಿರುದ್ದ ಅವಿಶ್ವಾಸ ಗೊತ್ತುವಳಿ ಸಭೆ, ಸದಸ್ಯರ ಗೈರು ಹಾಜರಾತಿ ಹಿನ್ನಲೆಯಲ್ಲಿ ಇದೇ ಅ.08ಕ್ಕೆ ಮುಂದೂಡಲಾಯಿತು. ಒಟ್ಟು 18 ಸದಸ್ಯರ ಬಳವುಳ್ಳ ನಾಗಮಂಗಲ ತಾಲೂಕು ಪಂಚಾಯ್ತಿಗೆ ಅಂದಿನ ಶಾಸಕರಾಗಿದ್ದ ಎನ್.ಚಲುವರಾಯಸ್ವಾಮಿ ಬಣದ 16 ಜೆಡಿಎಸ್ ಪಕ್ಷದ ಚಿಹ್ನೆಯಲ್ಲಿ ಗೆಲುವು ಸಾಧಿಸುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು.ಬದಲಾದ ರಾಜಕೀಯದಲ್ಲಿ ಚಲುವರಾಯಸ್ವಾಮಿ ಕಾಂಗ್ರೆಸ್ ಸೇರಿದರೂ, ಅಧ್ಯಕ್ಷರಾಗಿದ್ದ ದಾಸೇಗೌಡರು ಜೆಡಿಎಸ್ ಪಕ್ಷದಲ್ಲೇ ಉಳಿದಿದ್ದರು.ಆದರೆ ಅಧಿಕಾರದ ಒಪ್ಪಂದದಂತೆ ಅಧ್ಯಕ್ಷರ ರಾಜಿನಾಮೆಯ ಯತ್ನ ವಿಫಲವಾದ ಹಿನ್ನಲೆಯಲ್ಲಿ 12 ಸದಸ್ಯರ ಸಹಿಯೊಂದಿಗೆ ಅಧ್ಯಕ್ಷರ ವಿರುದ್ದ ಅವಿಶ್ವಾಸ ಗೊತ್ತುವಳಿಗೆ ಜಿಲ್ಲಾಧಿಕಾರಿಗಳ ಮೊರೆ ಹೋಗಿದ್ದರು.ಈ ಹಿನ್ನಲೆಯಲ್ಲಿ ನಿಯಮಾನುಸಾರ ಇಂದು ಬೆಳಿಗ್ಗೆ 11.30 ಕ್ಕೆ ನಿಗಧಿಯಂತೆ ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಸಭೆ ನಡೆಸಲು ಆಗಮಿಸಿದ್ದರು.ಆದರೆ ಯಾವೊಬ್ಬ ಸದಸ್ಯರು ಸಭೆಗೆ ಹಾಜರಾಗದ ಕಾರಣ 30 ನಿಮಿಷ ಸಭೆಯನ್ನು ಮುಂದೂಡಲಾಯಿತು. ಆದಾಗ್ಯೂ ಸದಸ್ಯರು ಹಾಜರಾಗದ ಕಾರಣ ಅ.08ಕ್ಕೆ ಸಭೆಯನ್ನು ಮುಂದೂಡಿ ನಿಯಮಾನುಸಾರ ಸಭೆಯನ್ನು ಮುಕ್ತಾಯಗೊಳಿಸಲಾಯಿತು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್,ಇಂದು ನಿಗಧಿಯಾಗಿದ್ದ ಅವಿಶ್ವಾಸ ಗೊತ್ತುವಳಿ ಸಭೆಯನ್ನು ನಿಯಮಾನುಸಾರ ದಿನಾಂಕ 08.10.2020 ರ ಬೆಳಿಗ್ಗೆ 11.30 ಕ್ಕೆ ಮುಂದೂಡಿದ ಬಗ್ಗೆ ಮಾಹಿತಿ ನೀಡುವ ಮೂಲಕ ನಿರ್ಗಮಿಸಿದರು. ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ಡಿವೈಎಸ್ಪಿ ವಿಶ್ವನಾಥ್ ನೇತೃತ್ವದಲ್ಲಿ ಸಿಪಿಐ ರಾಜೇಂದ್ರ ಹಾಗೂ ಪಿಎಸ್ಐ ರವಿಕಿರಣ್ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದರು. ಈ ಸಂದರ್ಭದಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಸೀಲ್ದಾರ್ ಕುಂಞ ಅಹಮ್ಮದ್ ಹಾಗೂ ತಾ.ಪಂ.ನೂತನ ಇಒ ಸತೀಶ್ಕುಮಾರ್ ಹಾಜರಿದ್ದರು.
ವರದಿ-ಎಸ್.ವೆಂಕಟೇಶ್.ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.