ಮಳವಳ್ಳಿ: ಉತ್ತರ ಪ್ರದೇಶ ರಾಜ್ಯದಲ್ಲಿ ಹೆಣ್ಣು ಮಕ್ಕಳ ಮೇಲೆ ನಿರಂತರ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು ಕೂಡಲೇ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಬಿ.ಜೆ.ಪಿ ಸರ್ಕಾರವನ್ನು ವಜಾ ಮಾಡಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವ ಬಗ್ಗೆ ಹಾಗೂ ಸದರಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ನ್ಯಾಯಾಂಗ ತನಿಖೆ ಒಳಪಡಿಸಲು ಆಗ್ರಹಿಸಿ ಬಹುಜನ ಸಮಾಜ ಪಕ್ಷದ ವತಿಯಿಂದ ತಹಸೀಲ್ದಾರ್ ರವರಿಗೆ ಮನವಿ ಪತ್ರ ಸಲ್ಲಿಸವಾಯಿತು. ಈ ವೇಳೆ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಎನ್, ವೀರಭದ್ರಯ್ಯ ಮಾತನಾಡಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಬಿ.ಜೆ.ಪಿ ಸರ್ಕಾರವು ರಾಜ್ಯದಲ್ಲಿ ಹೆಣ್ಣು ಮಕ್ಕಳ ಅಪಹರಣ, ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳನ್ನು ನಿಭಾಯಿಸುವಲ್ಲಿ ವಿಫಲವಾಗಿದೆ, ಇತ್ತೀಚಿಗೆ ಮನಿಶಾ ವಾಲ್ಮೀಕಿ ಎಂಬ ಹೆಣ್ಣು ಮಗಳನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ಸಂತ್ರಸ್ತೆಯ ಹೆಣವನ್ನು ಗೌರವಯುತವಾಗಿ ಸಂಸ್ಕಾರ ಮಾಡಲು ಸಂತ್ರಸ್ತ ಕುಟುಂಬಕ್ಕೆ ಅವಕಾಶ ನೀಡದಿರುವುದು ಹಾಗೂ ಪೋಲಿಸ್ ಇಲಾಖೆ ಯಾರಿಗೂ ತಿಳಿಯದಂತೆ ಶವವನ್ನು ಸುಟ್ಟು ಹಾಕಿ ಸಾಕ್ಷ್ಯನಾಶ ಮಾಡಿರುತ್ತಾರೆ. ಸರ್ಕಾರವು ಪರೋಕ್ಷವಾಗಿ ಇಂತಹ ಘಟನೆಗಳಲ್ಲಿ ಅಪರಾಧಿಗಳಿಗೆ ರಕ್ಷಣೆ ನೀಡುತ್ತಿರುವುದು ಕಂಡು ಬಂದಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ನೇತೃತ್ವದ ಬಿ.ಜೆ.ಪಿ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ, ಆದ್ದರಿಂದ ಕೂಡಲೇ ಉತ್ತರಪ್ರದೇಶ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತವನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ವೀರಭದ್ರಯ್ಯ, ತಾಲ್ಲೂಕು ಉಸ್ತುವಾರಿ ಕಮಲ್ ನಾಸೀರ್, ತಾಲ್ಲೂಕು ಪ್ರಧಾನ, ಕಾರ್ಯದರ್ಶಿ ಕೆ.ಎನ್.ಅಶೋಕ್ ಕುಮಾರ್,ಮುಖಂಡರಾದ ಹಲಸಹಳ್ಳಿ ಕೃಷ್ಣ, ಉಮೇಶ್ ಮೌರ್ಯ, ಮಲಿಯೂರು ಅಂಬರೀಷ್, ತಮ್ಮಯ್ಯ, ಶಿವಮೂರ್ತಿ, ಸುಧಾಕರ್, ಮಹೇಶ್ ಸೇರಿದಂತೆ ಇತರರು ಭಾಗಿಯಾಗಿದ್ದರು.
ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ