ವಿಜಯಪುರ: ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕುಮಸಗಿ ಕ್ರಾಸ್ ಬಳಿ ಗೂಬೆಯನ್ನು ಅಕ್ರಮವಾಗಿ ಹಿಡಿದಿಟ್ಟು ಮಹಾರಾಷ್ಟ್ರದಲ್ಲಿ ಮಾರಾಟ ಮಾಡಲು ತೆರಳುತ್ತಿದ್ದ ಇಬ್ಬರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಯಾವುದೋ ಅರಣ್ಯ ಪ್ರದೇಶದಿಂದ ಮೂರು ಜನರು ಅಕ್ರಮವಾಗಿ ಗೂಬೆಯನ್ನು ಹಿಡಿದು ಪಂಜರದಲ್ಲಿ ಕೂಡಿಹಾಕಿ ನೆರೆಯ ಮಹಾರಾಷ್ಟ್ರದಲ್ಲಿ ತಮ್ಮ ಹಣದಾಸೆಗೆ ಮಾರಾಟ ಮಾಡಲು ಹೊರಟಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಜೇರಟಗಿ ಗ್ರಾಮದ ಬಸನ್ನ ಪವಾರ (60) ವಿಠ್ಠಲ ಪವಾರ(32) ಇಬ್ಬರನ್ನು ಬಂಧಿಸಿದ್ದು, ಇನ್ನೊರ್ವ ಆರೋಪಿ ಶಿವು ಪವಾರ ಪರಾರಿಯಾಗಿದ್ದಾನೆ. ಆರೋಪಿಗಳಿಂದ 1.5ಕಿಲೋ ತೂಕದ ಗೂಗಿ, ಕೂಡಿಹಾಕಿದ್ದ ಪಂಜರದ ಜೊತೆಗೆ ಎರಡು ಮೋಟರ್ ಸೈಕಲ್ ಗಳನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದು, ಕಲಂ 9, 39, 44, 51 ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಪ್ರಕಾರ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.
ವರದಿ-ಅಂಬರೀಶ್ ಎಸ್.ಎಸ್ ಎಕ್ಸ್ ಪ್ರೆಸ್ ಟಿವಿ ವಿಜಯಪುರ