ನಾಗಮಂಗಲ: ಐಟಿ, ಇಡಿ ಮತ್ತು ಸಿಬಿಐ ದಾಳಿ ನಡೆಸುವುದಾರೆ ಒಬ್ಬರನ್ನು ಗುರಿ ಮಾಡಿ ದಾಳಿ ಮಾಡುವುದನ್ನು ಬಿಟ್ಟು ಎಲ್ಲಾ ಪಕ್ಷಗಳಲ್ಲಿರುವ ಭ್ರಷ್ಟರ ಮನೆಗಳ ಮೇಲೆ ದಾಳಿ ನಡೆಸಲಿ ಎಂದು ಜೆಡಿಎಸ್ ಶಾಸಕ ಸುರೇಶ್ಗೌಡ ಹೇಳಿದರು. ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕಿನ ಕಸಬಾ ಹೋಬಳಿಯ ಪಿ.ನೇರಲಕೆರೆ ಗ್ರಾಮದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಕೆಗೆ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದ ಶಾಸಕ ಮಾದ್ಯಮಗಳಿಗೆ ಪ್ರತಿಕ್ರಿಯಿಸಿ, ಕೇವಲ ಚುನಾವಣೆಗಳು ಘೋಷಣೆಯಾದ ನಂತರದ ಸಂದರ್ಭಕ್ಕೆ ಮಾತ್ರ ದಾಳಿ ಸೀಮಿತವಾಗಿರುವುದನ್ನು ರಾಜ್ಯದ ಜನತೆ ಅರಿತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾರ್ಯೋನ್ಮುಖರಾಗುವ ಈ ಇಲಾಖೆಗಳು ಇನ್ನುಳಿದ ಸಮಯದಲ್ಲಿ ಏನು ಮಾಡುತ್ತಿರುತ್ತವೆ ಎಂದು ಪ್ರಶ್ನಿಸಿದರು. ಭ್ರಷ್ಟರು ಎಂಬ ಖಚಿತ ಮಾಹಿತಿ ಇದ್ದರೆ ದಾಳಿ ಮಾಡಲು ಯಾವ ಸಮಯವಾದರೇನು.ರಾಜಕೀಯ ದುರುದ್ದೇಶದಿಂದಲೇ ಒಂದು ಪಕ್ಷ ಮತ್ತು ಓರ್ವ ವ್ಯಕ್ತಿಯನ್ನೇ ಗುರಿಯನ್ನಾಗಿಸಿ ದಾಳಿ ನಡೆಸುವುದು ಪ್ರಜಾತಂತ್ರದ ವ್ಯವಸ್ಥೆಯಲ್ಲಿ ಎಷ್ಟು ಸರಿ.ನಿಜವಾದ ಭ್ರಷ್ಟರ ಮೇಲೆ ದಾಳಿಮಾಡುವುದಾರೆ ಅನೇಕ ಅಧಿಕಾರಿಗಳು ಸೇರಿದಂತೆ ಎಲ್ಲಾ ಪಕ್ಷದಲ್ಲಿರುವ ಭ್ರಷ್ಟರ ಮನೆಗಳ ಮೇಲೂ ದಾಳಿ ಮಾಡುವ ಮೂಲಕ ತನಿಖಾ ಸಂಸ್ಥೆಗಳಿಗಿರುವ ನೈಜತೆಯನ್ನು ನಾಡಿನ ಜನತೆಯ ಮುಂದೆ ಸ್ಪಷ್ಟೀಕರಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಮಾರ್ಕೋನಹಳ್ಳಿ ಜಲಾಶಯದಿಂದ ತಾಲೂಕಿನ 128 ಹಳ್ಳಿಗಳಿಗೆ ಶುದ್ದ ಕುಡಿಯುವ ನೀರು ಪೂರೈಕೆಯಾಗುವ ಬೆನ್ನಲ್ಲೇ ಕೃಷ್ಣರಾಜ ಸಾಗರ ಜಲಾಶಯದಿಂದ ಶುದ್ದ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುವ ಕಾಮಗಾರಿಗೆ ಮುಂದಿನ ಎರಡು ವಾರಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಯುವ ಮೂಲಕ ಜಲಧಾರೆ ಯೋಜನೆಯಡಿಯಲ್ಲಿ ನಾಗಮಂಗಲ ವಿಧಾನಸಭಾ ಕ್ಷೇತ್ರದ ಪ್ರತಿ ಮನೆಗಳಿಗೂ ಕುಡಿಯುವ ನೀರು ಪೂರೈಸುವ ಪ್ರಕ್ರಿಯೆ ನನ್ನ ಅಧಿಕಾರಾವಧಿಯ ಗುರಿಯಾಗಿದೆ ಎಂದರು.
ವರದಿ- ಎಸ್.ವೆಂಕಟೇಶ್.ಎಕ್ಸ್ ಪ್ರೆಸ್ ಟಿವಿ ನಾಗಮಂಗಲ