ನಾಗಮಂಗಲ: ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕು, ಬೆಳ್ಳೂರು ಹೋಬಳಿ ವ್ಯಾಪ್ತಿಯಲ್ಲಿ ಕೈಗಾರೀಕರಣ ಉದ್ದೇಶಕ್ಕಾಗಿ ಭೂಸ್ವಾಧೀನಕ್ಕೊಳಪಟ್ಟ ರೈತರ ಮನವಿ ಮೇರೆಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಶಾಸಕರ ನೇತೃತ್ವದಲ್ಲಿ ಅ.03ರಂದು ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಅವರ ಜತೆ ಸಭೆ ನಡೆಸಿ ಸಾಗುವಳಿ ಭೂಮಿಯನ್ನು ಕೈಬಿಡುವಂತೆ ಹಾಗೂ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವ ಭೂಪ್ರದೇಶವನ್ನು ಪುನರ್ ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂಧಿಸಿದ ಸಚಿವ ಶೆಟ್ಟರ್ ಸ್ಥಳೀಯ ಶಾಸಕರ ಜತೆಗೂಡಿ ಪುನರ್ ಪರಿಶೀಲನೆ ನಡೆಸುವ ಜತೆಗೆ ಪುನರ್ ಸರ್ವೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಅದರಂತೆ ಹಟ್ನಾ, ಬಿಳಗುಂದ, ಗರುಡನಹಳ್ಳಿ, ಬೀಚನಹಳ್ಳಿ ಮತ್ತು ಚನ್ನಾಪುರ ಗ್ರಾಮಗಳ ವ್ಯಾಪ್ತಿಗೆ ಭೇಟಿ ನೀಡಿದ ಅಧಿಕಾರಿಗಳ ತಂಡ ಸ್ವಾಧೀನಕ್ಕೊಳಪಟ್ಟಿರುವ ಭೂಪ್ರದೇಶದ ನಕಾಶೆಯನ್ನಿಟ್ಟುಕೊಂಡು ಪುನರ್ ಪರಿಶೀಲನೆ ನಡೆಸಲಾಯಿತು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಸುರೇಶ್ಗೌಡ, ತಾಲೂಕಿನಲ್ಲಿ ಕೈಗಾರಿಕೆ ಸ್ಥಾಪನೆ ಮಾಡುವುದು ನಮ್ಮ ಪಕ್ಷದ ಕನಸಿನ ಕೂಸಾಗಿದ್ದು, ಅದರಂತೆ ಚುನಾವಣಾ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಕೈಗಾರಿಕೆ ಸ್ಥಾಪನೆಗೆ ಎಚ್ಡಿಕೆ ಆಧ್ಯತೆ ನೀಡಿದ್ದಾರೆ.ಇದರ ಕುರಿತಾಗಿ ವಿರೋಧಿ ಬಣದವರು ಏನಾದರೂ ಅಪಪ್ರಚಾರ ಮಾಡಿದರೂ ತಾಲುಕಿನ ರೈತರಿಗೆ ಭೂಸ್ವಾಧೀನ ಪ್ರಕ್ರಿಯೆಯ ಹಿಂದಿನ ಸತ್ಯದ ಅರಿವಿದೆ. ಯಾವೊಬ್ಬ ರೈತರಿಗೂ ಅನ್ಯಾಯವಾಗದಂತೆ ಕೈಗಾರಿಕೆ ಸ್ಥಾಪನೆ ಮಾಡಲಾಗುವುದು ಎಂದು ಸ್ಪಷ್ಟೀಕರಿಸಿದರು. ಸ್ಥಳೀಯ ಭೂಪ್ರದೇಶ ಕುರಿತಾಗಿ ವಾಸ್ತವತೆಯತೆಯನ್ನು ಅಧಿಕಾರಿಗಳ ತಂಡಕ್ಕೆ ಮನವರಿಕೆ ಮಾಡಿಕೊಡಲಾಗಿದೆ.ರೈತರಿಂದ ಪಡೆಯಲಾಗಿದ್ದ ಸಲಹೆಯನ್ನು ಅಧಿಕಾರಿಗಳ ತಂಡಕ್ಕೆ ತಿಳಿಸಲಾಗಿದ್ದು ಸ್ಥಳೀಯ ಭೌಗೋಳಿಕ ವಾಸ್ತವತೆಯನ್ನು ಅಧಿಕಾರಿಗಳು ಸಹ ಖುದ್ದು ಪರಿಶೀಲನೆ ನಡೆಸಿ ನೈಜತೆಯನ್ನು ಮನಗಂಡಿದ್ದಾರೆ. ಈ ಭಾಗದ ಯಾವೊಬ್ಬ ರೈತರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯವಾಗಿದೆ. ರೈತರು ಯಾವುದೇ ಆವೇಷಗಳಿಗೆ ಒಳಗಾಗದೆ ಮತ್ತು ಹೊರಗಿನವರ ಕುತಂತ್ರಕ್ಕೆ ಒಳಗಾಗದೆ ಶಾಂತ ರಿತಿಯಲ್ಲಿರುವಂತೆ ಮನವಿ ಮಾಡಿದರು. ಭೂಮಿ ಕಳೆದುಕೊಳ್ಳುವ ಆತಂಕದಲ್ಲಿ ರೈತರು ಸಣ್ಣ-ಪುಟ್ಟ ತಪ್ಪುಗಳನ್ನು ಮಾಡುವುದು ಸಹಜ. ಮುಗ್ದ ರೈತರು ಈಗಾಗಲೇ ಭೂಮಿ ಕಳೆದುಕೊಳ್ಳುವ ಆತಂಕದಲ್ಲಿದ್ದು ಪ್ರತಿಭಟನೆ ನಡೆಸಿದ್ದಾರೆ. ಆದ್ದರಿಂದ ಪ್ರತಿಭಟನೆ ನಡೆಸಿದ ರೈತರ ಮೇಲಿನ ಪ್ರಕರಣಗಳನ್ನು ಕೂಡಲೇ ರದ್ದುಪಡಿಸುವಂತೆ ಜಿಲ್ಲಾಡಳಿತವನ್ನು ಶಾಸಕ ಸುರೇಶ್ಗೌಡ ಒತ್ತಾಯಿಸಿದರು. ಅಧಿಕಾರಿಗಳ ತಂಡ ತೆರಳಿದ ನಂತರ ಆ ಭಾಗದ ರೈತರ ಜತೆ ಮತ್ತೊಂದು ಸುತ್ತಿನ ಸಭೆ ನಡೆಸಿದ ಶಾಸಕ, ಅಧಿಕಾರಿಗಳ ತಂಡ ನೀಡಿದ ಸಲಹೆ ಮತ್ತು ಮಾಹಿತಿಗಳನ್ನು ರೈತರೊಂದಿಗೆ ವಿನಿಮಯ ಮಾಡಿಕೊಂಡರು. ಈ ಸಂದರ್ಭ ರೈತರು ಕೈಗಾರಿಕೆ ಸ್ಥಾಪನೆಗೆ ನಮ್ಮ ತಕರಾರಿಲ್ಲ, ಆದರೆ ಸಾಗುವಳಿ ಭೂಮಿಯನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಿಸುವಂತೆ ಮನವಿ ಮಾಡಿದರು.ಈ ಸಂದರ್ಭ ಮನ್ಮುಲ್ ನಿರ್ದೇಶಕ ನೆಲ್ಲಿಗೆರೆ ಬಾಲು, ತಾ.ಪಂ.ಅಧ್ಯಕ್ಷ ದಾಸೇಗೌಡ, ತಾ.ಪಂ.ಸದಸ್ಯರಾದ ಹೇಮರಾಜು ಸೇರಿದಂತೆ ಮತ್ತಿತರಿದ್ದರು.
ವರದಿ-ಎಸ್.ವೆಂಕಟೇಶ್.ಎಕ್ಸ್ಪ್ರೆಸ್ ಟಿವಿ