ತಿಪಟೂರು: ಕೊರೊನಾ ಮುಂಜಾಗ್ರತೆ ಕ್ರಮವಾಗಿ ಇತಿಹಾಸ ಪ್ರಸಿದ್ಧ ತಿಪಟೂರಿನ ಗಣೇಶ ವಿಸರ್ಜನಾ ಮಹೋತ್ಸವವು ಉತ್ಸವ, ಆಡಂಬರವಿಲ್ಲದೇ ಸರಳವಾಗಿ ಮತ್ತು ಶಾಂತಿಯುತವಾಗಿ ನಡೆಯಿತು. ಈ ಬಾರಿ ವಿಜೃಂಭಣೆಯ ಗಣೇಶ ವಿಸರ್ಜನೆಗೆ ಕೊರೋನಾ ಅಡ್ಡಿಯಾಗಿದ್ದು,ಭಕ್ತಾದಿಗಳಿಗೆ ಮತ್ತು ಯುವ ಜನರಿಗೆ ನಿರಾಸೆಯನ್ನುಂಟು ಮಾಡಿತು. ನಗರದ ಸತ್ಯಗಣಪತಿ ಅಮೃತ ಭವನದಲ್ಲಿ 90 ದಿನಗಳ ವಿಶೇಷ ಪೂಜೆ ನಂತರ ಗಣೇಶ ವಿಸರ್ಜಿಸಲಾಗುತ್ತಿತ್ತು. ಈ ವರ್ಷ ಕೇವಲ ಒಂದು ಮಂಡಲ ಪೂಜೆ ಸಲ್ಲಿಸಿ ವಿಧವಿಧಾನದ ವಿಸರ್ಜನೆ ಮಾಡಲಾಗಿದೆ. ಪೊಲೀಸ್ ಬಂದೋ ಬಸ್ತ್ನಲ್ಲಿ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ಭಕ್ತರು ಉತ್ಸುಕತೆಯಿಂದಲೇ ವಿಸರ್ಜನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಯಾವುದೇ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಲ್ಲದೇ, ಪಟಾಕಿ ಸಿಡಿಸದೇ, ಪ್ರಸಾದ ವಿತರಿಸದೇ ನಗರದ ಅಮಾನಿಕೆರೆಯ ಕಲ್ಯಾಣಿಯಲ್ಲಿ ಗೌರಿ-ಗಣೇಶನನ್ನು ವಿಸರ್ಜನೆ ಮಾಡಲಾಯಿತು. ಈ ಇನ್ನೂ ಸಂದರ್ಭದಲ್ಲಿ ಶಾಸಕ ಬಿ.ಸಿ.ನಾಗೇಶ್, ಮುಖಂಡ ಕೆ.ಟಿ.ಶಾಂತಕುಮಾರ್, ಸತ್ಯ ಗಣಪತಿ ಸೇವಾ ಟ್ರಸ್ಟ್ ನ ಸದಸ್ಯರುಗಳು, ನಗರಸಭಾ ಸದಸ್ಯ, ಪಿ.ಜೆ.ರಾಮಮೋಹನ್, ಪ್ರಸನ್ನಕುಮಾರ್, ಶ್ರೀನಿವಾಸ್, ಕೋಟೆ ಪ್ರಭು, ನಗರಸಭೆ ಪೌರಾಯುಕ್ತ ಉಮಾಕಾಂತ್, ತುಮಕೂರಿನ ಹೆಚ್ಚುವರಿ ಅಧಿಕ್ಷಕ ಉದೇಶ್, ಐಪಿಎಸ್ ಅಧಿಕಾರಿ ಕನಿಕಾ, ಡಿವೈಎಸ್ಪಿ ಚಂದನ್ ಕುಮಾರ್ ಇದ್ದರು.
ವರದಿ-ಸಿದ್ದೇಶ್ವರ ಸಿಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು