ಸಿಂಧನೂರು: ಉತ್ತರ ಪ್ರದೇಶದ ಹತ್ರಾಸ್ ಗ್ರಾಮದಲ್ಲಿ ದಲಿತ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ಸಿಂಧನೂರಿನಲ್ಲಿ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಕ್ಯಾಂಡಲ್ ಮಾರ್ಚ್ ಮಾಡಲಾಯಿತು. ದೇಶದಲ್ಲಿಯೇ ಸಂಚಲನ ಮೂಡಿಸಿರುವ ಉತ್ತರ ಪ್ರದೇಶದ ದಲಿತ ಬಾಲಕಿಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದು, ರಾಯಚೂರು ಜಿಲ್ಲೆಯಲ್ಲೂ ವಿರೋಧ ವ್ಯಕ್ತವಾಯಿತು. ನಗರದಲ್ಲಿ ವಿವಿಧ ಸಂಘಟನೆಗಳ ಮುಸ್ಲಿಂ ಮಹಿಳೆಯರು ಸೇರಿದಂತೆ ಹಲವು ಸಂಘಟನೆಗಳು ಭಾಗವಹಿಸಿ ಘಟನೆಯನ್ನು ಖಂಡಿಸಿ ನಗರದ ಪ್ರಮುಖ ಬೀದಿಗಳಲ್ಲಿ ಕ್ಯಾಂಡಲ್ ಮಾರ್ಚ್ ಮಾಡುವ ಮೂಲಕ ಘಟನೆಯನ್ನು ವಿರೋಧಿಸಿ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಪ್ರತಿಭಟನೆ ಮಾಡಿದರು. ಇನ್ನೂ ಪ್ರತಿಭಟನೆ ವೇಳೆ ಮಾತನಾಡಿದ ಕೈಸರ್ ಸುಲ್ತಾನಾ ಈ ಘಟನೆ ಸಮಾಜವೇ ತಲೆ ತಗ್ಗಿಸುವಂಥದ್ದು, ಇಂತಹ ಕೃತ್ಯಗಳು ನಿಲ್ಲಬೇಕು, ದಲಿತ ಯುವತಿ ಮೇಲೆ ಅತ್ಯಾಚಾರ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ನೀಡಬೇಕು. ಯೋಗಿ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಕೇಂದ್ರ ಸರ್ಕಾರ ಅತ್ಯಾಚಾರ ಆರೋಪಿಗಳಿಗೆ ಕಠಿಣವಾದ ಶಿಕ್ಷೆ ಕೊಡಬೇಕು. ಸರ್ಕಾರ ಹೆಣ್ಣಿನ ಮೇಲೆ ಆಗುತ್ತಿರುವ ದೌರ್ಜನ್ಯ ಅತ್ಯಾಚಾರಗಳ ವಿರುದ್ಧ ಒಂದು ಕಠಿಣವಾದ ಕಾಯಿದೆ ಜಾರಿಗೆ ಮಾಡಬೇಕು ಎಂದು ಯೋಗಿ ಸರಕಾರ ಮತ್ತು ಕೇಂದ್ರದ ವಿರುದ್ಧ ಹರಿ ಹಾಯ್ದರು. ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ಜಿಲಾನಿಪಾಷಾ, ಬಾಬರ್ ಪಾಷಾ, ವಕೀಲ್ ಸುಬಾನಿ ಸಾಬ್, ದೇವೇಂದ್ರಗೌಡ, ಹಾಗೂ ಸುಲ್ತಾನ್ ಫಾತಿಮಾ ಸೇರಿದಂತೆ ನೂರಾರು ಮಹಿಳೆಯರು ಯುವಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು .
ವರದಿ : ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು