ಮಳವಳ್ಳಿ: ಟಿಎಪಿಸಿಎಂಎಸ್ ಚುನಾವಣೆಯ ಮತದಾನ ದಿನ ನಡೆದ ಘಟನೆಯಿಂದ ಕಾಂಗ್ರೆಸ್ ಪಕ್ಷ ಹಾಗೂ ವೀರಶೈವ ಸಮುದಾಯಕ್ಕೆ ನೋವಾಗಿದ್ದರೆ, ಪಕ್ಷದ ಕಾರ್ಯಕರ್ತರು ಹಾಗೂ ಸಮುದಾಯದ ಜನರಲ್ಲಿ ಕ್ಷಮೆಯಾಚಿಸುವೇ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಸುಜಾತ ಸುಂದ್ರಪ್ಪ ತಿಳಿಸಿದರು. ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಸಮುದಾಯ ಮುಖಂಡರ ಜತೆ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿದರು. ಇತ್ತೀಚಿಗೆ ನಡೆದ ಟಿಎಪಿಸಿಎಂಎಸ್ ಚುನಾವಣೆಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ನನ್ನ ಪತಿ ಸುಂದ್ರಪ್ಪ ಸ್ಪರ್ಧಿಸಿದ್ದರು. ಕೊನೆಯ ಗಳಿಗೆಯಲ್ಲಿ ನಮ್ಮ ನಾಯಕರಾದ ಪಿ.ಎಂ.ನರೇಂದ್ರಸ್ವಾಮಿ ಅವರು ಪಕ್ಷದ ಹಿತದೃಷ್ಟಿಯಿಂದ ಕಣದಿಂದ ಹಿಂದೆ ಸರಿಯುವಂತೆ ಸುಂದ್ರಪ್ಪ ಅವರಿಗೆ ಸೂಚನೆ ನೀಡಿದರು. ಈ ವೇಳೆ ಅವೇಶದಿಂದ ಪಕ್ಷ ಹಾಗೂ ನಾಯಕರ ವಿರುದ್ದ ಮಾತನಾಡಿದೆ ವಿನಃ ಯಾವುದೇ ದುರದ್ದೇಶದಿಂದಲ್ಲ. ಅಲ್ಲದೇ ನಾನು ಎಲ್ಲೂ ಆ ದಿನ ನಮ್ಮ ಸಮುದಾಯಕ್ಕೆ ಪಕ್ಷದಿಂದ ಅನ್ಯಾಯವಾಗಿದೆ ಎಂದು ಹೇಳಿಲ್ಲ ಎಂದರು. ಟಿಎಪಿಸಿಎಂಎಸ್ ಚುನಾವಣೆಗೆ ಸ್ಪರ್ಧಿಸಿದ್ದ 13 ಮಂದಿಯಲ್ಲಿ ನನ್ನ ಪತಿ ಸುಂದ್ರಪ್ಪ ಅವರು ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರಿಗೆ ತುಂಬಾ ಆತ್ಮೀಯರಾಗಿದ್ದು, ಹೀಗಾಗಿ ಅವರ ಮನವೊಲಿಕೆಗೆ ಯತ್ನಿಸಿದ್ದರು. ಆ ವೇಳೆ ಮನಸ್ಸಿಗೆ ಆದ ನೋವಿನಿಂದ ಪಕ್ಷದ ವಿರುದ್ದ ಮಾತನಾಡಿದ್ದು, ಈ ಬಗ್ಗೆ ಪಕ್ಷದ ಹೈಕಮಾಂಡ್ ಹಾಗೂ ಸಮುದಾಯದ ಮುಖಂಡರು ನಮಗೆ ನಮ್ಮ ತಪ್ಪಿನ ಅರಿವಿನ ಬಗ್ಗೆ ಮನವರಿಕೆ ಮಾಡಿದ್ದಾರೆ. ನರೇಂದ್ರಸ್ವಾಮಿ ಅವರ ನಾಯಕತ್ವದ ಮೇಲೆ ನಂಬಿಕೆಯಿದ್ದು, ಪಕ್ಷ ಸಂಘಟನೆಗೆ ದುಡಿಯುವುದಾಗಿ ತಿಳಿಸಿದರು.ವೀರಶೈವ ಸಮುದಾಯದ ಮುಖಂಡರಾದ ಮೂರ್ತಿ, ಪುರಸಭೆ ಮಾಜಿ ಅಧ್ಯಕ್ಷ ದಯಾಶಂಕರ್, ತಾ.ಪಂ.ಮಾಜಿ ಅಧ್ಯಕ್ಷ ಕುಂದೂರು ಪ್ರಕಾಶ್, ಎಪಿಎಂಸಿ ಮಾಜಿ ಅಧ್ಯಕ್ಷ ಅಂಬರೀಷ್, ಶಿವಸ್ವಾಮಿ, ಗಜೇಂದ್ರ, ಪಂಚಲಿಂಗಪ್ಪ ಇದ್ದರು.
ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ