ಲಿಂಗಸೂಗೂರು: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಪಟ್ಟಣ ಪಂಚಾಯತಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಸದಸ್ಯೆ ವಿಜಯಮ್ಮ ನಾಗರೆಡ್ಡಿ ಜೇರಬಂಡಿ, ಉಪಾಧ್ಯಕ್ಷರಾಗಿ ಜೆಡಿಎಸ್ ಸದಸ್ಯೆ ನಾಗರತ್ನ ಶರಣಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣೆ ಅಧಿಕಾರಿ ತಹಶೀಲ್ದಾರ ಚಾಮರಾಜ್ ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು. ಒಟ್ಟು 13 ಸದಸ್ಯರಲ್ಲಿ ಕಾಂಗ್ರೆಸ್ 8 ಸದಸ್ಯರನ್ನು ಹೊಂದಿದ್ದರೂ ಜೆಡಿಎಸ್ ಪಾಲಿಗೆ ಉಪಾಧ್ಯಕ್ಷ ಸ್ಥಾನ ಬಿಟ್ಟು ಕೊಟ್ಟಿರುವುದು ಕಾಂಗ್ರೆಸ್ ಒಳಗಿನ ಒಡಕನ್ನು ಬಯಲು ಮಾಡಿದೆ. ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ಬೆಂಬಲಿತ ಕಾಂಗ್ರೆಸ್ ನಾಲ್ವರು ಸದಸ್ಯರು, ಜೆಡಿಎಸ್ ಸದಸ್ಯರಿಗೆ ಉಪಾಧ್ಯಕ್ಷ ಸ್ಥಾನ ಬಿಟ್ಟುಕೊಡುವ ಮೂಲಕ ಅಧಿಕಾರದ ಗದ್ದುಗೆ ಹಿಡಿದು ಶಾಸಕ ಡಿ.ಎಸ್.ಹೂಲಗೇರಿ ಬಣಕ್ಕೆ ಸೆಡ್ಡು ಹೊಡೆದಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ಹಾಗೂ ಮೀಸಲಾತಿ ಅನ್ವಯ ಆಕಾಂಕ್ಷಿಗಳು ಇದ್ದರೂ ಹಟ್ಟಿ ಪಟ್ಟಣ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ವಶಕ್ಕೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಶಾಸಕ ಡಿ.ಎಸ್.ಹೂಲಗೇರಿ ಬಗ್ಗೆ ಕಾಂಗ್ರೆಸ್ನ ಇನ್ನುಳಿದ ನಾಲ್ವರು ಸದಸ್ಯರು ಅಸಮಾಧಾನ ಹೊಂದಲು ಕಾರಣವಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಬಣ್ಣ ಎರಚಿ ಸಂಭ್ರಮಾಚರಣೆ ಮಾಡಿದರು.
ವರದಿ-ವೀರೇಶ್ ಅರಮನಿ ಎಕ್ಸ್ಪ್ರೆಸ್ ಟಿವಿ ಲಿಂಗಸೂಗೂರು.