ಮಂಡ್ಯ: ಮಂಡ್ಯ ಜಿಲ್ಲೆ, ನಾಗಮಂಗಲ ತಾಲ್ಲೂಕಿನ ಬಿಜಿ ನಗರದ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ದೈನಂದಿನ ಶೈಕ್ಷಣಿಕ ಚಟುವಟಿಕೆಗಳಲ್ಲಿ ಎಲ್ಲವನ್ನೂ ಇಂಗ್ಲಿಷ್ ಭಾಷೆಯಲ್ಲಿಯೇ ವ್ಯವಹರಿಸುವ, ವೈದ್ಯಕೀಯ ಕಾಲೇಜು ಶಿಕ್ಷಣ ವ್ಯವಸ್ಥೆಯಲ್ಲಿಯೂ, ಸರಳತೆಯಿಂದ ಕನ್ನಡ ರಾಜ್ಯೋತ್ಸವವನ್ನು ಬಿಜಿಎಸ್ ಸಭಾಂಗಣದಲ್ಲಿ ಆಚರಿಸಲಾಯಿತು. ಡಾ.ಕೆ.ಎಸ್.ನಿಸಾರ್ ಅಹಮ್ಮದ್ ವೇದಿಕೆ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ನಾಗಮಂಗಲ ತಾಲ್ಲೂಕು ದಂಡಾಧಿಕಾರಿ ಕುಂಞ ಅಹಮ್ಮದ್ ಮಾತನಾಡಿ ಶಾಸ್ತ್ರೀಯ ಸ್ಥಾನ-ಮಾನದ ಮೂಲಕ 8 ಜ್ಞಾನಪೀಠ ಪ್ರಶಸ್ತಿಗಳಿಗೆ ಪುರಸ್ಕಾರಕ್ಕೆ ಭಾಜನವಾಗಿರುವ ಕನ್ನಡ ಭಾಷೆಯ ಬಳಕೆ ನಮ್ಮ ಹೆಗ್ಗಳಿಕೆಯಾಗಬೇಕು. ಭಾರತಮಾತೆಯ ಮಗಳಾಗಿ ವಿಜ್ರಂಭಿಸುತ್ತಿರುವ ಕನ್ನಡಾಂಭೆಯ ಮಕ್ಕಳಾದ ನಾವು ಅನ್ಯ ಭಾಷೆಗಳನ್ನು ಗೌರವಿಸುವ ಜೊತೆಗೆ ಮಾತೃಭಾಷೆಯನ್ನು ಮನೆ-ಮನಗಳಲ್ಲಿ ಆರಾಧಿಸುವ ಮೂಲಕ ನಿತ್ಯೋತ್ಸವವಾಗಿ ಆಚರಿಸೋಣ ಎಂದರು.