ಮನುಷ್ಯನ ಬೇಡಿಕೆಗಳ ಈಡೇರಿಕೆಗೆ ಹತ್ತು ಹಲವು ರೂಪದಲ್ಲಿ ನಿವೇಧಿಸುವುದು ನಮ್ಮ ದೇಶದ ಮಣ್ಣಿನ ಭಾವನಾತ್ಮಕ ಗುಣ. ಇದು ಇಂದು ನಿನ್ನೆಯದಲ್ಲ ಪುರಾತನ ಕಾಲದಿಂದಲೂ ಸಾಗಿ ಬಂದಿರುವ ನಂಬಿಕೆಯ ಪರಂಪರೆ. ವಾರ್ಷಿಕವಾಗಿ ಬರುವ ಜೇಷ್ಠ, ಆಶಾಡ, ಶ್ರಾವಣ ಹಾಗೂ ಭಾದ್ರಪದ ಇತ್ಯಾದಿ ಹತ್ತು ಮಾಸಗಳಲ್ಲಿಯೂ ಒಂದಲ್ಲ ಒಂದು ವಿಶೇಷತೆ ಇದ್ದರೂ, ಕಾರ್ತಿಕ ಮಾಸ ವಿಶೇಷತೆಯಲ್ಲಿ ವೈಶಿಷ್ಟ್ಯತೆ ಹೊಂದಿದೆ. ಮಹದೇಶ್ವರ ಹಾಗೂ ಬಸವೇಶ್ವರ ಸೇರಿದಂತೆ ಈಶ್ವರ ದೇಗುಲಗಳಲ್ಲಿ ಮಾಸ ಪೂರ್ತಿ ವಿಶೇಷ ಪೂಜಾ ಕೈಂಕರ್ಯಗಳು ಈಗ ಸಾಮಾನ್ಯ. ಆದರೆ ಕಾರ್ತಿಕ ಮಾಸದ ಪ್ರಾರಂಭದ ದಿನಗಳಲ್ಲಿ ಜರುಗುವ ಹಾಲರಬಿ ಸೇವೆಯಲ್ಲಿ ಸಂತಾನ ಭಾಗ್ಯಕ್ಕೆ ಮೊರೆ ಹೋಗುವ ಧಾರ್ಮಿಕ ನಂಬಿಕೆಯ ಆಚರಣೆಗೆ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ದೇವಾಲಯಗಳ ನಾಡು ನಾಗಮಂಗಲ ತಾಲ್ಲೂಕಿನ ಕೆ.ಮಲ್ಲೇನಹಳ್ಳಿ ಮಹದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಸಾಕ್ಷೀಕರಿಸುತ್ತಿದೆ.
ಆಧುನಿಕತೆ ಮತ್ತು ತಂತ್ರಜ್ಞಾನ ಮುಂದುವರೆದಿರುವ ವರ್ತಮಾನದಲ್ಲಿಯೂ ಇಂತಹ ನಂಬಿಕಾರ್ಹ ಆಚರಣೆ ಹಿಂದು ಧರ್ಮದ ಧಾರ್ಮಿಕ ಭಾವನೆಗೆ ಹಿಡಿದ ಕೈಗನ್ನಡಿ. ನಾಗಮಂಗಲ ಪಟ್ಟಣದ ಕೆ.ಆರ್.ಪೇಟೆ ಮತ್ತು ಮೈಸೂರು ರಸ್ತೆಯ ವೃತ್ತಕ್ಕೆ ಹೊಂದಿಕೊಂಡಂತಿರುವ ಈ ಗ್ರಾಮದ ಮಹದೇಶ್ವರ ಜಾತ್ರಾಮಹೋತ್ಸವದಲ್ಲಿ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಭಾಗವಹಿಸುವ ಮೂಲಕ ತಮ್ಮ ತಮ್ಮ ಪಾಲಿನ ಸೇವಾಕರ್ತವ್ಯ ನಿರ್ವಹಿಸುವುದು ವಾಡಿಕೆ ಅದರಂತೆ ದೇವಾಲಯದ ಕೂಗಳತೆಯಲ್ಲಿರುವ ಸೂಳೆಕೆರೆಯ ತಟದಲ್ಲಿ ಮಂಗಳವಾರ ಮುಂಜಾನೆ ನಡೆದ ಹಾಲರಬಿ ಸೇವೆಯಲ್ಲಿ ಮದುವೆಯಾಗಿ ಹತ್ತಾರು ವರ್ಷಗಳು ಕಳೆದರೂ ಮಕ್ಕಳಿಲ್ಲದ ಅದೆಷ್ಟೋ ಮಹಿಳೆಯರು ವರಸೆಯಲ್ಲಿ ಮಾವರಾಗುವವರ ಸಹಾಯದಲ್ಲಿ ಕೆರೆಯಲ್ಲಿ ಮಿಂದು ಗಂಗೆ ಪೂಜೆಯೊಂದಿಗೆ ಹುಡಿ ತುಂಬುವ ಮೂಲಕ ಕಳಶ ಹೊತ್ತು ಉತ್ಸವ ಮೂರ್ತಿಯೊಂದಿಗೆ ಸಾಗುತ್ತಾರೆ. ಮೆರವಣಿಗೆಯಲ್ಲಿ ದೇವಾಲಯದ ಆವರಣ ಪ್ರವೇಶಿಸಿದ ಮಹಿಳೆಯರು ಅರಳಿಮರದ ಬುಡಕ್ಕೆ ಕಳಶದ ನೀರೆರೆಯುವ ಮೂಲಕ ಸಂತಾನ ಭಾಗ್ಯದ ಮೊರೆಯನ್ನು ಪ್ರಾರ್ಥಿಸುತ್ತಾರೆ. ಮೊರೆ ಫಲಿಸಿದ ತಾಯಂದಿರು ತೊಟ್ಟಿಲು ಸೇವೆ ಸಲ್ಲಿಸುವ ಮೂಲಕ ಹರಕೆ ತೀರಿಸುವುದು ಇಲ್ಲಿನ ವೈಶಿಷ್ಟ್ಯ. ಒಟ್ಡಾರೆ ಆಧುನಿಕತೆ ಮತ್ತು ತಂತ್ರಜ್ಞಾನದ ಅಬ್ಬರದ ಇಂತಹ ದಿನಗಳಲ್ಲಿ ಕೇವಲ ಪ್ರತಿಷ್ಟೆ ಮತ್ತು ಸ್ವಾರ್ಥಕ್ಕಾಗಿ ನಡೆಯುತ್ತಿರುವ ಅದೇಷ್ಟೋ ಪೂಜಾ ಕಾರ್ಯಕ್ರಮಗಳ ನಡುವೆಯೂ ಜೀವಂತವಾಗಿರುವ ಧಾರ್ಮಿಕ ಭಾವನೆ ಶೋಷಣೆಗೊಳಗಾಗದೆ ಮುಂದುವರೆಯಲಿ ಎಂಬುದು ನಮ್ಮ ಆಶಯ..
ವರದಿ-ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.