ತಿಪಟೂರು: ಕೊರೋನಾ ಸಂಕಷ್ಟದಲ್ಲಿರುವ ಜನತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಪರಿಹಾರ ಕೊಡುವ ಬದಲು ಸಾಮಾನ್ಯ ಜನರ ಮೇಲೆ ಬರೆ ಎಳೆಯುತ್ತಿದೆ ಎಂದು ಮಾಜಿ ಶಾಸಕ ಕೆ.ಷಡಕ್ಷರಿ ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ವಿದ್ಯುತ್ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ನಗರದ ನಗರಸಭೆ ವೃತ್ತದಲ್ಲಿ ತಾಲ್ಲೂಕು ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮಾತನಾಡಿದ ಅವರು ಸಾಮಾನ್ಯ ಜನರು ಈಗ ಬಂದಿರುವ ಮಹಾಮಾರಿ ಸಾಂಕ್ರಾಮಿಕ ರೋಗದಿಂದ ಪಾರಾಗ ಬೇಕೋ ಅಥವಾ ಜೀವನ ಸಾಗಿಸಲು ಏನು ಮಾಡಬೇಕು ಎನ್ನುವ ಮನಸ್ಥಿತಿಯಲ್ಲಿ ಇರುವಾಗ ಸರ್ಕಾರ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಜತೆಗೆ ವಿದ್ಯುತ್ ಬೆಲೆ ಏರಿಸುವುದನ್ನು ನೋಡಿದರೆ ಇದು ಯಾರ ಪರವಾದ ಸರ್ಕಾರ ಎಂಬುದು ತಿಳಿಯುತ್ತದೆ ಎಂದರು. ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರೈತರಿಗೆ ಉಚಿತ ವಿದ್ಯುತ್ ನೀಡುವುದಾಗಿ ತಿಳಿಸಿದ್ದ ಬಿಜೆಪಿ ಸರ್ಕಾರ ಬರಗಾಲದಲ್ಲಿ ರೈತರ ಬೆನ್ನು ಮೂಳೆ ಮುರಿಯುವಂತೆ ವಿದ್ಯುತ್ ದರವನ್ನು ಏರಿಸಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಮಡೇನೂರು ಕಾಂತರಾಜು ಮಾತನಾಡಿ ಸಾಮಾನ್ಯ ಜನರ ಕಷ್ಟಕ್ಕೆ ಸ್ಪಂದಿಸದೆ ಮಂತ್ರಿಯಾಗಲು ದಿಲ್ಲಿ ಬೆಂಗಳೂರಿಗೆ ತಿರುಗಾಡುತ್ತಿದ್ದಾರೆ ಹೇಗೆ ಜನರ ಕಷ್ಟಗಳನ್ನು ಅರಿಯುತ್ತಾರೆ ಎಂದು ಟೀಕಿಸಿದರು. ಪ್ರತಿಭಟನೆಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಶಿವಸ್ವಾಮಿ ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸುರೇಶ್ ನಗರಸಭಾ ಸದಸ್ಯರು ಕಾಂಗ್ರೆಸ್ಸಿನ ಕಾರ್ಯಕರ್ತರು ಹಾಜರಿದ್ದರು.
ವರದಿ- ಸಿದ್ಧೇಶ್ವರ ಸಿ.ಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.